ಕಾಗಿನೆಲೆಯು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಕಾಗಿನೆಲೆ ಗ್ರಾಮ ಇದ್ದು , ಇದು ಕನಕದಾಸರ ಆರಾಧ್ಯದೈವ ಆದಿಕೇಶವನ ನೆಲೆಬೀಡು. ಕಾಗಿನೆಲೆಯಲ್ಲಿ ಕನಕದಾಸರ ಗುರು ಪೀಠವು ಕರ್ನಾಟಕ ರಾಜ್ಯದಲ್ಲಿ ಕುರುಬ ಗೌಡರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಸ್ಥಾಪಿಸಲ್ಪಟ್ಟಿದೆ. ಕನಕ ದಾಸರ ಸಮಾಧಿಯ ಮೇಲೆ 1842 ರಲ್ಲಿ ಕನಕದಾಸರ ದೇಗುಲವನ್ನು ನಿರ್ಮಿಸಿದೆ. ಅದರಲ್ಲಿ ಕನಕದಾಸರು ತಂಬೂರ ಹಿಡಿದಿರುವ ಪ್ರತಿಮೆ ಇದೆ. ಅವರು ಬಳಸುತ್ತಿದ್ದ ಶಂಖ ಮತ್ತು ಭಿಕ್ಷಾಪಾತ್ರೆಯನ್ನು ಸಹ ನಿರ್ಮಿಸಲಾಗಿದೆ.
ಕಾಗಿನೆಲೆ ಕನಕದಾಸ ಗದ್ದುಗೆಯ ದೂರಗಳು
- ಬೆಂಗಳೂರು – 345 ಕಿ.ಮೀ
- ಹಾವೇರಿ – 16 ಕಿ.ಮೀ
- ಬ್ಯಾಡಗಿ – 19 ಕಿ.ಮೀ
- ಬ್ಯಾಡಗಿ ರೈಲ್ವೆ ನಿಲ್ದಾಣ – 25 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 17 ಕಿ.ಮೀ
ಕನಕದಾಸರು ಬಾಡ ಗ್ರಾಮದಲ್ಲಿ ತಂದೆ ಬೀರಪ್ಪ ಮತ್ತು ತಾಯಿ ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಅವರ ಜನನ-ಮರಣ ಕಾಲಾವಧಿ (30 ನವೆಂಬರ್ 1508 – 1606) ಎಂದು ಹೇಳಲಾಗುತ್ತದೆ. ಇವರ ಮೂಲ ಹೆಸರು ತಿಮ್ಮಪ್ಪ ನಾಯಕವಾಗಿತ್ತು.
ಕಾಗಿನೆಲೆ ಹಿಂದೆ ಒಂದು ಪ್ರಾಂತ್ಯವಾಗಿದ್ದು, ಅನೇಕ ಗ್ರಾಮಗಳನ್ನು ಒಳಗೊಂಡಿತ್ತು. ಈ ಪ್ರದೇಶದಲ್ಲಿ ಸುಮಾರು 10 ಪುರಾತನ ದೇವಾಲಯಗಳು ಹಾಗೂ 15ಕ್ಕೂ ಹೆಚ್ಚು ಶಿಲಾಶಾಸನಗಳು ಕಂಡುಬರುತ್ತವೆ. ಒಮ್ಮೆ ಇದು ಬನವಾಸಿಯ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಬನವಾಸಿ ಚಾಲುಕ್ಯರ ಕೈಗೆ ಸೇರಿದಾಗ, ಕಾಗಿನೆಲೆಯೂ ಅವರ ಆಡಳಿತಕ್ಕೆ ಒಳಪಟ್ಟಿತು. ಕೆಲವು ಕಾಲ ದೇವಗಿರಿಯ ಯಾದವರ ಆಳ್ವಿಕೆಯಲ್ಲಿ ಇತ್ತು. ಚಾಲುಕ್ಯರ ಭುವನೈಕಮಲ್ಲನ ದತ್ತಿ-ದಾನಗಳ ಬಗ್ಗೆ ಶಾಸನಾಧಾರಗಳಿವೆ. ದೇವಗಿರಿಯ ಯಾದವರು ಬೆಟ್ಟೇಶ್ವರ ಮತ್ತು ಕಾಳಹಸ್ತೀಶ್ವರ ದೇವಾಲಯಗಳಿಗೆ ದಾನ ನೀಡಿದ ದಾಖಲೆಗಳೂ ದೊರೆಯುತ್ತವೆ.
14ನೇ ಶತಮಾನದಲ್ಲಿ ಬಹಮನೀ ಸುಲ್ತಾನರು ವಿಜಯನಗರದ ಅರಸು ಬುಕ್ಕರಿಂದ ಈ ಪ್ರದೇಶವನ್ನು ವಶಪಡಿಸಿಕೊಂಡರು. ನಂತರ ಮತ್ತೆ ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ಬಂದು ಪ್ರತ್ಯೇಕ ಪ್ರಾಂತ್ಯವಾಗಿ ಉಳಿಯಿತು. ಈ ಅವಧಿಯಲ್ಲಿ ಕನಕದಾಸರು ಇಲ್ಲಿ ದಂಡನಾಯಕನಾಗಿ ಕಾರ್ಯನಿರ್ವಹಿಸಿ ವಿಜಯನಗರದ ಮಾಂಡಲೀಕರಾಗಿದ್ದರು. ಬಳಿಕ ವಿಜಾಪುರದ ಸುಲ್ತಾನರು ಈ ಪ್ರದೇಶವನ್ನು ಜಯಿಸಿ ಬಂಕಾಪುರ ಪ್ರಾಂತ್ಯಕ್ಕೆ ಸೇರಿಸಿದರು. ಮುಸ್ತಫಾಖಾನನ ದಾಳಿಯಿಂದ ಇಲ್ಲಿನ ಕೋಟೆ-ಕೊತ್ತಳಗಳು ಹಾನಿಗೊಳಗಾದವು ಎಂದು ಹೇಳಲಾಗಿದೆ. ನಂತರ ಇದು ಸವಣೂರ ನವಾಬರು, ಮೊಘಲ್, ಮರಾಠರು ಹಾಗೂ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು.
ಮಲೆನಾಡಿನ ಅಂಚಿನಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಆಂಡಯ್ಯ ಮತ್ತು ಕನಕದಾಸರು ಇಲ್ಲಿನ ಸೌಂದರ್ಯವನ್ನು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ. ಈ ವೈಭವವನ್ನು ಚಾಲುಕ್ಯ ಮತ್ತು ಯಾದವ ಕಾಲದ ಶಾಸನಗಳಲ್ಲಿಯೂ ಕಾಣಬಹುದು.
ಪ್ರಾಚೀನ ಕಾಲದಿಂದಲೇ ಕಾಗಿನೆಲೆ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. ಜೈನ, ವೈಷ್ಣವ, ಶೈವ ಮತ್ತು ವೀರಶೈವ ಸಂಸ್ಕೃತಿಗಳ ಸಂಗಮವನ್ನು ಇಲ್ಲಿನ ಅನೇಕ ಗುಡಿಗಳು ಮತ್ತು ಗೋಪುರಗಳು ಸೂಚಿಸುತ್ತವೆ. 10ನೇ ಶತಮಾನದಲ್ಲಿ ಸ್ಥಾಪಿತವಾದ ಲಕ್ಷ್ಮೀನರಸಿಂಹ, ಆದಿಕೇಶವ, ಕಾಳಹಸ್ತೀಶ್ವರ, ವೀರಭದ್ರ, ಸೋಮೇಶ್ವರ, ಬ್ರಹ್ಮೇಶ್ವರ, ಸಂಗಮೇಶ್ವರ, ಬಸವಣ್ಣ ಮತ್ತು ಆದಿಶಕ್ತಿ ದೇವಾಲಯಗಳು ಪ್ರಮುಖವಾಗಿವೆ.
ಇಲ್ಲಿನ ಪ್ರಮುಖ ದೇವಾಲಯಗಳು ಆದಿಕೇಶವ ಮತ್ತು ನರಸಿಂಹ ದೇವಾಲಯಗಳಾಗಿವೆ. ಮಣ್ಣಿನ ಗೋಡೆಯಿಂದ ಸುತ್ತುವರಿದ ಪ್ರಾಕಾರದೊಳಗೆ ಈ ಎರಡೂ ದೇವಾಲಯಗಳಿವೆ. ಹೆಬ್ಬಾಗಿಲಿನಿಂದ ಪ್ರವೇಶಿಸಿದಾಗ ಮೊದಲಿಗೆ ನರಸಿಂಹ ದೇವಾಲಯ ಕಾಣುತ್ತದೆ; ಅದರ ಎಡಭಾಗದಲ್ಲಿ ಸುಮಾರು 10 ಅಡಿಗಳ ದೂರದಲ್ಲಿ ಆದಿಕೇಶವ ದೇವಾಲಯವಿದೆ. 16ನೇ ಶತಮಾನದಲ್ಲಿ ಕನಕದಾಸರು ಬಾಡ ಗ್ರಾಮದಿಂದ ತಂದ ಆದಿಕೇಶವ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದರು. ಈ ಮೂರ್ತಿಯ ಎತ್ತರ ಸುಮಾರು 1½ ಅಡಿ.
ಇಲ್ಲಿನ ಕೆರೆಯ ದಂಡೆಯ ಮೇಲೆ ಕನಕದಾಸರ ಸಮಾಧಿಯಿದೆ. ಸುಮಾರು 9ನೇ ಶತಮಾನದಿಂದ 16ನೇ ಶತಮಾನದವರೆಗೆ ಕಾಗಿನೆಲೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ನಂತರ ಮುಸ್ಲಿಂ ಆಳ್ವಿಕೆಯಲ್ಲಿ ಧಾರ್ಮಿಕ ಚಟುವಟಿಕೆಗಳು ಕುಂಠಿತವಾದವು.
ಭೇಟಿ ನೀಡಿ




