ದಕ್ಷಿಣ ಭಾರತದಲ್ಲಿರುವ ಏಳು ತಿರುಪತಿಗಳಲ್ಲಿ ಕೋಲಾರದಲ್ಲಿರುವ ಚಿಕ್ಕ ತಿರುಪತಿ ಪ್ರಮುಖವಾಗಿದೆ. ಈ ದೇವಾಲಯವು ಧಾರ್ಮಿಕ ಮಹತ್ವ ಹೊಂದಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿ ಹೋಬಳಿಯಲ್ಲಿ ಇರುವ ಪ್ರಮುಖ ಹಿಂದೂ ದೇವಾಲಯವಾಗಿದೆ.
ಈ ದೇವಾಲಯವು ದ್ರಾವಿಡ ಶೈಲಿಯ ಶಿಲ್ಪಕಲೆಯಲ್ಲಿ ನಿರ್ಮಿಸಲ್ಪಟ್ಟಿದ್ದು, ಆಂಧ್ರಪ್ರದೇಶದ ತಿರುಪತಿಯ ವೇಂಕಟೇಶ್ವರ ದೇವಾಲಯದೊಂದಿಗೆ ಅನ್ಯೋನ್ಯತೆ ಹೊಂದಿದೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿ ವಿಷ್ಣುವನ್ನು ವೇಂಕಟೇಶ್ವರನಾಗಿ ಹಾಗೂ ಅವರ ಪತ್ನಿ ಲಕ್ಷ್ಮಿಯನ್ನು ಅಲಮೆಲುಮಂಗಮ್ಮೆಯಾಗಿ ಪೂಜಿಸಲಾಗುತ್ತದೆ.
ಚಿಕ್ಕ ತಿರುಪತಿ ದೇವಸ್ಥಾನದ ದೂರಗಳು
- ಬೆಂಗಳೂರು – 43 ಕಿ.ಮೀ
- ಕೋಲಾರ – 42 ಕಿ.ಮೀ
- ಮಾಲೂರು – 17 ಕಿ.ಮೀ
- ಮಾಲೂರು ರೈಲ್ವೆ ನಿಲ್ದಾಣ – 16 ಕಿ.ಮೀ
- ದೇವನಗೊಂದಿ ರೈಲ್ವೆ ನಿಲ್ದಾಣ – 13 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 66 ಕಿ.ಮೀ
ಇತಿಹಾಸ
ದ್ವಾಪರ ಯುಗದಲ್ಲಿ ರಾಜರು ಮತ್ತು ಋಷಿಮುನಿಗಳು ನಡೆಸುತ್ತಿದ್ದ ಯಜ್ಞ-ಯಾಗಗಳಲ್ಲಿ ಅರ್ಪಿಸಲ್ಪಡುವ ಹವಿಸ್ಸಿನ ರೂಪದ ತುಪ್ಪವನ್ನು ಸೇವಿಸಿದ ಪರಿಣಾಮ ಅಗ್ನಿದೇವರಿಗೆ ಉದರ ಬೇನೆ ಉಂಟಾಗುತ್ತದೆ. ಆಗ ದೇವಲೋಕದ ವೈದ್ಯರಾದ ಅಶ್ವಿನಿ ಕುಮಾರರು, ಔಷಧಿ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಭಕ್ಷಿಸಿದರೆ ಈ ಉದರ ನೋವು ನಿವಾರಣೆಯಾಗುತ್ತದೆ ಎಂದು ತಿಳಿಸುತ್ತಾರೆ. ಅದನಂತರ ಅಗ್ನಿದೇವರು ಅರ್ಜುನ ಹಾಗೂ ಶ್ರೀಕೃಷ್ಣರ ಸಹಾಯದಿಂದ ಖಾಂಡವ ವನವನ್ನು ದಹಿಸುತ್ತಾರೆ.
ಈ ಸಂದರ್ಭದಲ್ಲಿ ವನ ದಹನವಾಗುವಾಗ ತಕ್ಷಕ ಎಂಬ ಸರ್ಪವು ಬೆಂಕಿಗೆ ಸಿಲುಕಿ ದೇಹದಟ್ಟಾಗಿ ಸುಟ್ಟುಕೊಂಡು, ಅಗ್ನಿದೇವರು ತೇಜಹೀನನಾಗುವಂತೆ ಶಾಪ ನೀಡುತ್ತದೆ. ತಕ್ಷಕನ ಶಾಪದ ಪರಿಣಾಮವಾಗಿ ಅಗ್ನಿ ತೇಜಹೀನನಾಗುತ್ತಾನೆ. ಪರಿಣಾಮವಾಗಿ ಲೋಕದಲ್ಲಿ ಯಜ್ಞ-ಯಾಗಗಳು ನಿಂತು ಹೋಗುತ್ತವೆ. ದೇವತೆಗಳು ತಮ್ಮ ಪಾಲಿನ ಹವಿರ್ಭಾಗವೂ ಸಿಗದೆ ಸಂಕಟಕ್ಕೊಳಗಾಗುತ್ತಾರೆ.
ಕೊನೆಗೆ ಅಗ್ನಿದೇವರು ಮಹಾವಿಷ್ಣುವನ್ನು ಕುರಿತು ಘೋರ ತಪಸ್ಸು ಆಚರಿಸುತ್ತಾರೆ. ಅವರ ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಪ್ರತ್ಯಕ್ಷರಾಗಿ ಅಗ್ನಿದೇವರ ಶಾಪ ವಿಮೋಚನೆ ಮಾಡುತ್ತಾರೆ. ವಿಷ್ಣುವಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಅಗ್ನಿದೇವರು ಈ ಸ್ಥಳದಲ್ಲಿ ಪ್ರಸನ್ನ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.
ಚೈತ್ರ ಮಾಸದ ಪುಬ್ಬಾ ನಕ್ಷತ್ರದಂದು, ಅಗ್ನಿಗೆ ಅಭಯ ದೊರೆತ ಶುಭದಿನದ ಸ್ಮರಣಾರ್ಥವಾಗಿ ಚಿಕ್ಕ ತಿರುಪತಿಯಲ್ಲಿ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಭೇಟಿ ನೀಡಿ






