ಹಾಸನಾಂಬ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಸಲೈನ್ ರಸ್ತೆಯಲ್ಲಿ ಇರುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುತ್ತದೆ. ಇದು ಹೊಯ್ಸಳ ವಾಸ್ತುಶಿಲ್ಪ ಮತ್ತು ಹಿಂದೂ ದೇವಾಲಯ ವಾಸ್ತುಶಿಲ್ಪದ ವಿಶೇಷತೆಯನ್ನು ಹೊಂದಿದೆ. ಹಾಸನಾಂಬ ದೇವಾಲಯವು ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ಶ್ರೀಮಂತ ಇತಿಹಾಸ ಮತ್ತು ದೀಪಾವಳಿಯ ಸಮಯದಲ್ಲಿ ವರ್ಷಕ್ಕೊಮ್ಮೆ ಮಾತ್ರ ತೆರೆಯುವ ವಿಶಿಷ್ಟ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಹಾಸನಾಂಬ ದೇವಿಗೆ ಸಮರ್ಪಿತವಾಗಿದ್ದು, ಹಾಸನಾಂಬೆ ನಗರ ದೇವತೆಯಾಗಿರುವುದರಿಂದ ಈ ನಗರಕ್ಕೆ ‘ಹಾಸನ’ ಎಂದು ಹೆಸರಿಸಲಾಯಿತು.
ಈ ದೇವಾಲಯವು ಬೆಂಗಳೂರಿನಿಂದ NH-75 ಮೂಲಕ 184 ಕಿ.ಮೀ, ಕುಣಿಗಲ್–ಮದ್ದೂರು ರಸ್ತೆ ಹಾಗೂ NH-75 ಮೂಲಕ 235 ಕಿ.ಮೀ, ಹಾಸನದಿಂದ ಕೇವಲ 1.2 ಕಿ.ಮೀ ಮತ್ತು ಹಾಸನ ರೈಲು ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.
ಇತಿಹಾಸ
ಕ್ರಿ.ಶ. 114ರ ವೀರಗಲ್ಲಿ ಕುದೂರು ಗಾಂಧಿ ಶಾಸನದ ಪ್ರಕಾರ ಇದು 12ನೇ ಶತಮಾನದ ಪಾಳೇಗಾರ ಕೃಷ್ಣಪ್ಪ ನಾಯಕರ ಕಾಲದ್ದು. ಕೃಷ್ಣಪ್ಪ ನಾಯಕರು ವ್ಯಾಪಾರ ಪ್ರಯಾಣಕ್ಕೆ ಹೋಗುತ್ತಿದ್ದಾಗ, ಮೊಲವೊಂದು ಅವರ ಕಣ್ಣಿಗೆ ಬಿದ್ದಿತು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತಿತ್ತು. ಆಗ ಆದಿಶಕ್ತಿ ಸ್ವರೂಪಿಣಿಯು ಪ್ರತ್ಯಕ್ಷವಾಗಿ, “ಈ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸು, ನಾನು ಇಲ್ಲಿ ಹಾಸನಾಂಬೆಯಾಗಿ ನೆಲೆಸುತ್ತೇನೆ” ಎಂದು ವರದಾನ ನೀಡಿದಳೆಂದು ನಂಬಿಕೆ ಇದೆ.
ಇನ್ನೊಂದು ಪುರಾಣದ ಪ್ರಕಾರ, ಬ್ರಾಹ್ಮೀದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ದುರ್ಗೆ ಎಂಬ ಏಳು ಮಾತೃಕೆಯರು ಕಾಶಿಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕಾಗಿ ಇಲ್ಲಿಗೆ ಬಂದರು. ಅವುಗಳಲ್ಲಿ ವೈಷ್ಣವಿ, ವರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇವಾಲಯವಾಗಿದೆ. ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ ಬ್ರಾಹ್ಮೀದೇವಿ ಮತ್ತು ಹೊಸಕೋಟೆಯಲ್ಲಿರುವ ಕೆಂಚಮ್ಮ ದೇವಿಯವರು ನೆಲೆಸಿದ್ದಾರೆ.
ಭೇಟಿ ನೀಡಿ




