ಹಾಲು ರಾಮೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದಲ್ಲಿರುವ ಪುರಾತನ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿರುವ ಉದ್ಭವ ಗಂಗೆಯ ಕಾರಣದಿಂದಾಗಿ ಇದು ನಾಡಿನೆಲ್ಲೆಡೆ ಪ್ರಸಿದ್ಧಿಯಾಗಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ತಾಣವು ಅನೇಕ ದೇವಾಲಯಗಳನ್ನು ಒಳಗೊಂಡ ಪ್ರಾಕಾರವನ್ನು ಹೊಂದಿದೆ. ಪ್ರತಿದಿನ ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣಗಳಲ್ಲಿ ಇದೂ ಒಂದಾಗಿದೆ.
ಶ್ರೀ ಹಾಲು ರಾಮೇಶ್ವರ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 211 ಕಿ.ಮೀ
- ಚಿತ್ರದುರ್ಗ – 50 ಕಿ.ಮೀ
- ಹೊಸದುರ್ಗ – 10 ಕಿ.ಮೀ
- ಹೊಸದುರ್ಗ ರೈಲ್ವೆ ನಿಲ್ದಾಣ – 22 ಕಿ.ಮೀ
- ಚಿತ್ರದುರ್ಗ ರೈಲ್ವೆ ನಿಲ್ದಾಣ – 51 ಕಿ.ಮೀ
ಶ್ರೀರಾಮಚಂದ್ರನು ಅರಣ್ಯವಾಸದ ಸಂದರ್ಭದಲ್ಲಿ ಈ ಪುಣ್ಯಕ್ಷೇತ್ರದಲ್ಲಿ ಪೂಜೆ ಸಲ್ಲಿಸುವಾಗ ಶಿವಲಿಂಗವು ಇಲ್ಲಿ ಸ್ವಯಂಭುವಾಗಿ ಉದ್ಭವಗೊಂಡಿತೆಂದು ನಂಬಲಾಗಿದೆ. ಈ ಲಿಂಗವೇ ಪ್ರಭಾವಶಾಲಿ ಶ್ರೀ ರಾಮಲಿಂಗೇಶ್ವರ ಲಿಂಗವೆಂದು ಪ್ರಸಿದ್ಧಿಯಾಗಿದೆ.
ಈ ಸ್ಥಳದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿರುವ ಗಂಗಾ ಕೊಳ. ಈ ಕೊಳವನ್ನು ಸ್ವತಃ ವಾಲ್ಮೀಕಿ ಮಹರ್ಷಿಗಳು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಇದರೊಂದಿಗೆ ಸಂಬಂಧಿಸಿದ ಒಂದು ರೋಚಕ ಕಥೆಯೂ ಇದೆ. ಒಮ್ಮೆ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿ ದೇವಿಯು ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಬಂಗಾರದ ಕಡಗವನ್ನು ಸಮರ್ಪಿಸುತ್ತಾಳೆ. ಆಕೆ ಗಂಗೆಯಲ್ಲಿ ಸಮರ್ಪಿಸಿದ ಆ ಕಡಗವು ಈ ಊರಿನ ಹುತ್ತವೊಂದರಲ್ಲಿ ದೊರಕುತ್ತದೆ. ತದನಂತರ ಈ ಸ್ಥಳದಲ್ಲಿ ಗಂಗೋದ್ಭವ ಸಂಭವಿಸಿದೆ ಎಂದು ನಂಬಲಾಗಿದೆ.
ಈ ವಿಷಯವನ್ನು ತಿಳಿದು ವಾಲ್ಮೀಕಿ ಮಹರ್ಷಿಗಳು ಇಲ್ಲಿ ಆಗಮಿಸಿದಾಗ, ಗಂಗಾಮಾತೆ ಪ್ರತ್ಯಕ್ಷವಾಗಿ ತಾನು ವಾರಣಾಸಿಯಿಂದ ಇಲ್ಲಿ ಹರಿದುಬಂದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವುದಾಗಿ ಹೇಳಿ ಅಂತರಧಾನವಾಗುತ್ತಾಳೆ. ನಂತರ ವಾಲ್ಮೀಕಿ ಮಹರ್ಷಿಗಳು ಈ ನೀರಿನ ಕೊಳದ ಮೇಲೆ ಗಂಗಾಮಾತೆಯನ್ನು ಪ್ರತಿಷ್ಠಾಪಿಸುತ್ತಾರೆ. ಅವರು ಪ್ರತಿಷ್ಠಾಪಿಸಿದ ಗಂಗಾಮಾತೆಯ ವಿಗ್ರಹವನ್ನು ಇಂದಿಗೂ ಇಲ್ಲಿ ಕಾಣಬಹುದು.
ಈ ಕೊಳದ ನೀರು ಹಾಲಿನಂತೆ ಕಾಣುವುದರಿಂದ ಈ ಕ್ಷೇತ್ರಕ್ಕೆ ‘ಹಾಲು ರಾಮಲಿಂಗೇಶ್ವರ’ ಎಂಬ ಹೆಸರು ಬಂದಿದೆ. ಇಲ್ಲಿರುವ ಉದ್ಭವ ಗಂಗೆಯಿಂದಾಗಿ ಈ ತಾಣವು ಪ್ರಸಿದ್ಧಿಯಾಗಿದೆ. ಕೊಳದ ತಳದಿಂದ ಮೇಲಕ್ಕೆ ಹರಿದುಬರುವ ಜಲಸ್ರೋತಗಳು ಇಲ್ಲಿಯ ವಿಶೇಷ ಆಕರ್ಷಣೆಯಾಗಿವೆ.
ಇಲ್ಲಿಯ ಮುಖ್ಯ ದೇವಾಲಯದೊಳಗೆ ಹೊಯ್ಸಳ ಕಾಲದ ಕೆಲವು ಮೂರ್ತಿಗಳಿವೆ. ಗಂಗಾದೇವಿ ಗುಡಿ ಹಾಗೂ ಉಯ್ಯಾಲೆಕಂಬಗಳು ಚಿತ್ರದುರ್ಗ ಪಾಳೆಯಗಾರರ ಕೊಡುಗೆಗಳಾಗಿವೆ. ಹೆಚ್ಚುವರಿಯಾಗಿ, ಜಲವು ಹಂತ ಹಂತವಾಗಿ ಮುಂದೆ ಹರಿಯುವಂತೆ ಪುಷ್ಕರಣಿಗಳನ್ನೂ ನಿರ್ಮಿಸಲಾಗಿದೆ.
ಭೇಟಿ ನೀಡಿ






