ಹೊಸದುರ್ಗ ಕೋಟೆ

ಹೊಸದುರ್ಗ ಕೋಟೆಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಚಿತ್ರದುರ್ಗದ ಪಾಳೆಗಾರ ಚಿಕ್ಕಣ್ಣ ನಾಯಕನು ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದ ಮೇಲೆ ಕ್ರಿ.ಶ. 1675ರಲ್ಲಿ ಈ ಕೋಟೆಯನ್ನು ನಿರ್ಮಿಸಿದನು.

ಹೊಸದುರ್ಗ ಕೋಟೆಯ ದೂರಗಳು

  • ಬೆಂಗಳೂರು – 210 ಕಿ.ಮೀ
  • ಚಿತ್ರದುರ್ಗ – 65 ಕಿ.ಮೀ
  • ಹೊಸದುರ್ಗ – 3 ಕಿ.ಮೀ
  • ಹೊಸದುರ್ಗ ರೈಲ್ವೆ ನಿಲ್ದಾಣ – 20 ಕಿ.ಮೀ
  • ಚಿತ್ರದುರ್ಗ ರೈಲ್ವೆ ನಿಲ್ದಾಣ – 65 ಕಿ.ಮೀ

ಇತಿಹಾಸ

ಶಿರಾ ಮಹಮದೀಯರ ವಶದಲ್ಲಿದ್ದ ಸಂಪದ್ಭರಿತ ಬಾಗೂರು ಕೋಟೆಯನ್ನು ವಶಪಡಿಸಿಕೊಳ್ಳಲು ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣ ನಾಯಕನು ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದ ಮೇಲೆ ಕ್ರಿ.ಶ. 1675ರಲ್ಲಿ ಕೋಟೆ, ಮದ್ದಿನ ಉಗ್ರಾಣ, ದೇವಾಲಯ, ಅರಮನೆ ಹಾಗೂ ಸೈನಿಕರ ವಸತಿಗಳನ್ನು ನಿರ್ಮಿಸಿಕೊಂಡು ಸೇನೆಯೊಂದಿಗೆ ಬಂದು ನೆಲೆಸಿದನು.

ಚಿಕ್ಕಣ್ಣ ನಾಯಕನು ನಿರ್ಮಿಸಿದ ಈ ಕೋಟೆಗೆ ತನ್ನ ಮೂಲ ಕೋಟೆಯಾದ ಚಿತ್ರದುರ್ಗದ ಹೆಸರನ್ನು ನೆನಪಿಸುವಂತೆ ‘ಹೊಸದಾದ ದುರ್ಗ’ ಎಂಬ ಅರ್ಥದಲ್ಲಿ ‘ಹೊಸದುರ್ಗ’ ಎಂಬ ಹೆಸರು ಬಂದಿದೆ. ಚಿಕ್ಕಣ್ಣ ನಾಯಕನ ನಂತರ ದಂಡಿನ ಜಂಪಣ್ಣ ನಾಯಕನು ಆಳ್ವಿಕೆ ನಡೆಸಿದನು. ನಂತರ ಹೈದರಾಲಿ ದುರ್ಗದ ಮೇಲಿನ ಸೇಡಿಗಾಗಿ ಬಾಗೂರು ಮತ್ತು ಹೊಸದುರ್ಗ ಕೋಟೆಗಳನ್ನು ಲೂಟಿ ಮಾಡಿದನೆಂದು ಇತಿಹಾಸಕಾರರು ಹೇಳುತ್ತಾರೆ.

ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದಲ್ಲಿ ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾದ ಕೋಟೆಯ ಅವಶೇಷಗಳು, ಗುಡಿಗಳು, ವೀರಗಲ್ಲುಗಳು ಹಾಗೂ ದೇವರ ವಿಗ್ರಹಗಳು ಪತ್ತೆಯಾಗಿವೆ. ಇಲ್ಲಿ ಐದು ಸುತ್ತಿನ ಹಾಗೂ ಮೂರು ಸುತ್ತಿನ ಕೋಟೆಗಳ ಅವಶೇಷಗಳಿದ್ದು, ವೀರಭದ್ರಸ್ವಾಮಿ ಮತ್ತು ಕಾಳಿಕಾದೇವಿ ದೇವಾಲಯಗಳೂ ಇವೆ. ಪಕ್ಕದಲ್ಲೇ ‘ಹುಣಸೆಹೊಂಡ’ ಎಂಬ ಕೊಳವಿದ್ದು, ಎಂತಹ ಬೇಸಿಗೆಯಲ್ಲಿಯೂ ಇದರ ನೀರು ಬತ್ತುವುದಿಲ್ಲ.

ಅಲ್ಲಿಂದ ಮುಂದೆ ಸಾಗಿದರೆ ಕಲ್ಲಿನಲ್ಲಿ ನಿರ್ಮಿಸಲಾದ ನಾಗಪ್ಪನ ಮೂರ್ತಿಯು ಕಾಣಿಸುತ್ತದೆ. ಬೆಟ್ಟದ ಮೇಲ್ಭಾಗದಲ್ಲಿ, ಕೋಟೆಯ ಪ್ರದೇಶದಲ್ಲೇ ಶ್ರೀ ಕಾಲಭೈರೇಶ್ವರ ಸ್ವಾಮಿ ದೇವಾಲಯವಿದೆ.

ಚಿತ್ರದುರ್ಗ ಕೋಟೆಯಲ್ಲಿ ಇರುವಂತೆ ಹೊಸದುರ್ಗ ಕೋಟೆಯಲ್ಲಿಯೂ ನಾಗರಕಲ್ಲುಗಳಿವೆ. ಹಲವು ವರ್ಷಗಳ ಹಿಂದೆ ಕೋಟೆಯಲ್ಲಿ ಸ್ಥಾಪಿಸಿದ್ದ ನಾಗರಕಲ್ಲುಗಳು ಕೆಳಗೆ ಬಿದ್ದಿದ್ದವು. ಅದರಿಂದ ತಾಲ್ಲೂಕಿನಲ್ಲಿ ಬರಗಾಲ ಉಂಟಾಯಿತು ಎಂಬ ನಂಬಿಕೆ ಇದೆ. ನಂತರ ಅಂದಿನ ಮಂಡಲ ಪಂಚಾಯಿತಿ ಅಧ್ಯಕ್ಷ ಅಂಜನಕುಮಾರ್ ಅವರು ಸುತ್ತಮುತ್ತಲಿನ ದೇವರ ಸಮ್ಮುಖದಲ್ಲಿ ಆ ನಾಗರಕಲ್ಲುಗಳನ್ನು ಮರುಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು. ಅದರ ನಂತರ ಮಳೆ ಸುರಿಯಲು ಆರಂಭವಾಯಿತು ಎಂಬುದು ಸ್ಥಳೀಯರ ಪ್ರತೀತಿ.

ಭೇಟಿ ನೀಡಿ
ಹೊಸದುರ್ಗ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section