ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ (ಗುಂಪಾ)ವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಮನ್ನಳ್ಳಿ ರಸ್ತೆಯಲ್ಲಿ ಇರುವ ಮಠ ಮತ್ತು ದೇವಾಲಯವಾಗಿದೆ. ಈ ಮಠವನ್ನು 1986ರಲ್ಲಿ ಶ್ರೀ ಶಿವಕುಮಾರ್ ಸ್ವಾಮೀಜಿಯವರು ನಿರ್ಮಿಸಿದರು. ಕಳೆದ ಮೂರು ದಶಕಗಳಿಂದ ಶ್ರೀ ಸಿದ್ದಾರೂಢ ಮಠ ಗುಂಪಾ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಸಿದ್ದಾರೂಢ ಮಠದ ದೂರಗಳು
- ಬೆಂಗಳೂರು – 671 ಕಿ.ಮೀ
- ಬೀದರ್ – 5 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 4 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 4 ಕಿ.ಮೀ
ಶ್ರೀ ಸಿದ್ದಾರೂಢ ಪ್ರತಿಮೆಯ ಎರಡೂ ಬದಿಗಳಲ್ಲಿ 12 ಜ್ಯೋತಿರ್ಲಿಂಗಗಳಿವೆ. ಶ್ರೀ ಶಿವಕುಮಾರ್ ಸ್ವಾಮೀಜಿವರು ಶ್ರಾವಣ ಮಾಸ (ಜುಲೈ), ನವರಾತ್ರಿ ಹಾಗೂ ಪ್ರತಿ ಭಾನುವಾರ ಸಂಜೆ ಪ್ರವಚನ ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ಭಕ್ತರು ಆಧ್ಯಾತ್ಮಿಕ ಹಸಿವನ್ನು ನೀಗಿಸಿಕೊಂಡಿದ್ದಾರೆ. ಬೀದರಿನ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಶಕರು ಅಥವಾ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ಅವರ ಯಾತ್ರೆ ಅಪೂರ್ಣವೆನಿಸುತ್ತದೆ.
ಪ್ರತಿ ವರ್ಷ ಸದ್ಗುರು ಸಿದ್ದಾರೂಢ ಹಾಗೂ ಶಿವಕುಮಾರ ಮಹಾಸ್ವಾಮೀಜಿ ಜಯಂತಿಯನ್ನು ಆಚರಿಸಲು ಭಾರತದ ವಿಭಿನ್ನ ಭಾಗಗಳಿಂದ ಅನೇಕ ಭಕ್ತರು ಇಲ್ಲಿ ಆಗಮಿಸುತ್ತಾರೆ. ಈ ಆಚರಣೆಯನ್ನು ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನೆರವೇರಿಸಲಾಗುತ್ತದೆ.
ಕಿರು ಪರಿಚಯ
ಸಿದ್ಧಾರೂಢರು ಒಬ್ಬರು ಮಹಾನ್ ಸಂತರು. ಅವರು ಬೀದರ್ ಜಿಲ್ಲೆಯ ಚಳಕಾಪುರದಲ್ಲಿ 1836ರಲ್ಲಿ ಜನಿಸಿದರು. ಚಿಕ್ಕಂದಿನಲ್ಲಿಯೇ ಅವರಿಗೆ ಜೀವನದ ಐಹಿಕ ಸುಖಭೋಗಗಳಲ್ಲಿ ವಿರಕ್ತಿ ಬಂದು ಸಂನ್ಯಾಸವನ್ನು ಸ್ವೀಕಾರ ಮಾಡಿದರು. ಮನೆ ಬಿಟ್ಟು ಲೋಕಸಂಚಾರಿಯಾದರು. ಹಾಗೆ ಊರಿಂದೂರಿಗೆ ಸಂಚರಿಸುತ್ತಿದ್ದ ಸ್ವಾಮಿಗಳು ತಮ್ಮ 41ನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನೆಲೆ ನಿಂತರು. ಅವರು ಆ ಸ್ಥಳವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡರು ಮತ್ತು ನಂಬಿ ಬಂದವರಿಗೆ ಅಭಯ ನೀಡಿದರು. ದೇವರ ಭಕ್ತಿಯಿಂದ ಸಕಲ ಕಷ್ಟಗಳೂ ದೂರಾಗುತ್ತವೆ ಎಂಬ ಪ್ರೇರಣೆ ತುಂಬಿದರು. “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ಜಾತಿಭೇದಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ಬೋಧಿಸಿದರು.
ಭೇಟಿ ನೀಡಿ





