ಸಾವನದುರ್ಗ ಬೆಟ್ಟ

ಸಾವನದುರ್ಗ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇರುವ ಏಷ್ಯಾದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1226 ಮೀಟರ್‌ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿದೆ.

ಈ ಬೆಟ್ಟವು ಬೆಂಗಳೂರಿಂದ 46 ಕಿ.ಮೀ ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ದಿಂದ 27 ಕಿ.ಮೀ ದೂರದಲ್ಲಿದೆ. ಹಾಗೂ ಚನ್ನಪಟ್ಟಣ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಾಲಯವಿದೆ. ಈ ದೇವಾಲಯಗಳು ಕ್ರಿ.ಶ 1340 ರ ಹಿಂದಿನದು ಮತ್ತು ಹೊಯ್ಸಳ ದೊರೆಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ.

ಸಾವನದುರ್ಗ ಬೆಟ್ಟದ ಚಾರಣ ಮಾಡಲು ಅರಣ್ಯ ಇಲಾಖೆ ಆರಂಭಿಸಿದ aranyavihaara.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವಾರದ ದಿನಗಳಲ್ಲಿ ಒಬ್ಬ ವ್ಯಕ್ತಿಗೆ Rs.300/- ಹಾಗೂ ವಾರಂತ್ಯ ಮತ್ತು ಇತರೆ ರಜೆ ದಿನಗಳಲ್ಲಿ Rs.400/- ಟಿಕೆಟ್ ದರ ನಿಗದಿಪಡಿಸಲಾಗಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ತಲಾ Rs.150/- ಹಾಗೂ ಇತರೆ ರಜಾ ದಿನಗಳಲ್ಲಿ Rs.200/- ನಿಗದಿಪಡಿಸಲಾಗಿದೆ.

ಸಾವನದುರ್ಗ ಬೆಟ್ಟ ಚಾರಣ ಮಾಡಲು ಆನ್ಲೈನ್ ಮೂಲಕ ನೋಂದಣಿ ಮಾಡಲು ಕೆಳಗಿನ ಲಿಂಕ್ ಉಪಯೋಗಿಸಿ..

ಸಾವನದುರ್ಗ ಹೆಸರಿನ ಉಗಮ

ಈ ಸ್ಥಳದ ಮೊದಲ ಉಲ್ಲೇಖವು ಕ್ರಿ.ಶ. 1340 ರ ಹಿಂದಿನದು. ಈ ದಾಖಲೆಯು ಮೋಡಬಾಳದ ಹೊಯ್ಸಳ ಬಲ್ಲಾಳ -III ರವರದ್ದಾಗಿದ್ದು, ಅಲ್ಲಿ ಈ ಸ್ಥಳವನ್ನು “ಸಾವಂಡಿ” ಎಂದು ಕರೆಯಲಾಗುತ್ತದೆ. ನಂತರದ ದಾಖಲೆಗಳು ಸಹ ಈ ಹೆಸರನ್ನು ಸಮರ್ಥಿಸುತ್ತವೆ. ಸಾವನದುರ್ಗ ಎಂಬ ಹೆಸರು ಮಾಗಡಿಯ ಅಚ್ಯುತರಾಯನ ಆಳ್ವಿಕೆಯಲ್ಲಿ ರಾಜ್ಯಪಾಲನಾಗಿದ್ದ ಸಾವಂತರಾಯನಿಂದ ಬಂದ ಸಾವಂತ ದುರ್ಗದಿಂದ ಹುಟ್ಟಿಕೊಂಡಿರಬಹುದು ಎಂಬ ಅಭಿಪ್ರಾಯವೂ ಇದೆ.

1638 ರಲ್ಲಿ ಕೆಂಪೇಗೌಡನು ತನ್ನ ರಾಜಧಾನಿಯನ್ನು ಬೆಂಗಳೂರಿನಿಂದ ಸಾವನದುರ್ಗಕ್ಕೆ ಸ್ಥಳಾಂತರಿಸಿ ಅದನ್ನು ಬಲಪಡಿಸಿದನು. ಕ್ರಿ.ಶ. 1728 ರವರೆಗೆ ಇದು ಕೆಂಪೇಗೌಡನ ಉತ್ತರಾಧಿಕಾರಿಗಳ ಆಳ್ವಿಕೆಯಲ್ಲಿತ್ತು. ಕ್ರಿ.ಶ. 1728 ರಲ್ಲಿ ಈ ಸ್ಥಳವನ್ನು ದಳವಾಯಿ ದೇವರಾಜನು ಈ ಸ್ಥಳವನ್ನು ಆಳುತ್ತಿದ್ದನು. ನಂತರ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನನು ಸಾವನದುರ್ಗವನ್ನು ವಶಪಡಿಸಿಕೊಂಡನು.

ಟಿಪ್ಪು ಸುಲ್ತಾನನು ಅಪರಾಧಿಗಳನ್ನು ಪರ್ವತದ ತುದಿಯಿಂದ ಮರಣದಂಡನೆಗೆ ತಳ್ಳುವ ಮೂಲಕ ಶಿಕ್ಷೆ ವಿಧಿಸುತ್ತಿದ್ದನೆಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ‘ಸಾವಿನ ದುರ್ಗ’ ಎಂದು ಕರೆಯಲಾಯಿತು, ಅಂದರೆ ಸಾವಿನ ಕೋಟೆ. ನಂತರ ಕ್ರಿ.ಶ. 1791ರಲ್ಲಿ, ಲಾರ್ಡ್ ಕಾರ್ನ್‌ವಾಲಿಸ್ ಟಿಪ್ಪು ಸುಲ್ತಾನನಿಂದ ಸಾವನದುರ್ಗವನ್ನು ವಶಪಡಿಸಿಕೊಂಡನು. 1799 ರಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ, ಟಿಪ್ಪುವನ್ನು ಬ್ರಿಟಿಷರು ಕೊಂದರು. ನಂತರದ ವರ್ಷಗಳಲ್ಲಿ ಬ್ರಿಟಿಷರು ಈ ಸ್ಥಳವನ್ನು ಮೈಸೂರು ಆಡಳಿತಗಾರರಿಗೆ ಹಸ್ತಾಂತರಿಸಿದರು ಮತ್ತು ಅವರು ಭಾರತದ ಸ್ವಾತಂತ್ರ್ಯದ ನಂತರವೂ ಸಾವನದುರ್ಗ ಮತ್ತು ಮಾಗಡಿಯನ್ನು ಮೈಸೂರಿನ ಭಾಗವಾಗಿ ಆಳಿದರು.