ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಇರುವ ಒಂದು ಸುಂದರ ಬೆಟ್ಟವಾಗಿದೆ. ಹಿಂದೂಗಳ ತೀರ್ಥಯಾತ್ರೆಯ ಸ್ಥಳವಾಗಿರುವ ಈ ಗಿರಿಧಾಮದ ಮೇಲ್ಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ದೇವಾಲಯ ಇದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1,450 ಮೀಟರ್ ಎತ್ತರದಲ್ಲಿದ್ದು, ವ್ಯಾಪಕವಾಗಿ ಕಾಡುಗಳಿಂದ ಕೂಡಿರುವ ಪ್ರದೇಶವಾಗಿದೆ.

ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 217 ಕಿ.ಮೀ, ಮೈಸೂರಿನಿಂದ 80 ಕಿ.ಮೀ ಹಾಗೂ ಗುಂಡ್ಲುಪೇಟೆಯಿಂದ 20 ಕಿ.ಮೀ ದೂರದಲ್ಲಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಬಹುದಾದ ಸಮಯ ಬೆಳಿಗ್ಗೆ 8:30 ರಿಂದ ಸಂಜೆ 4:00 ರವರೆಗೆ ಮಾತ್ರ.

ಇದು ಹೊಯ್ಸಳ ಕಾಲದಲ್ಲಿ ರಾಜ ವೀರ ಬಲ್ಲಾಳನು ಕ್ರಿ.ಶ. 1315ರಲ್ಲಿ ಸಾಂಪ್ರದಾಯಿಕ ದೇವಾಲಯವನ್ನು ನಿರ್ಮಿಸಿದ್ದ ಸ್ಥಳ. ನಂತರ ಮೈಸೂರಿನ ಒಡೆಯರ್ ವಂಶಸ್ಥರು ಈ ಬೆಟ್ಟದ ದೇವಾಲಯವನ್ನು ಮರುನಿರ್ಮಿಸಿದರು. ಈ ದೇವಾಲಯವನ್ನು “ಅಗಸ್ತ್ಯ” ಎಂಬ ಋಷಿಯು ಸ್ಥಾಪಿಸಿದ್ದರೆಂದು ತಿಳಿಯುತ್ತದೆ ಮತ್ತು ಇದು ಗೋಪಾಲಸ್ವಾಮಿ (ಕೃಷ್ಣ) ನಿಗೆ ಸಮರ್ಪಿತವಾಗಿದೆ. ದಟ್ಟವಾದ ಮಂಜು ವರ್ಷಪೂರ್ತಿ ಈ ಬೆಟ್ಟವನ್ನು ಆವರಿಸುತ್ತದೆ. “ಹಿಮವದ್” ಎಂದರೆ ಮಂಜಿನಿಂದ ಆವೃತವಾದದ್ದು ಎಂಬ ಅರ್ಥ. ವೇಣುಗೋಪಾಲಸ್ವಾಮಿ (ಕೃಷ್ಣ) ದೇವಾಲಯವೇ ‘ ಹಿಮವದ್ ಗೋಪಾಲಸ್ವಾಮಿ ಬೆಟ್ಟ’ ಎಂಬ ಪೂರ್ಣ ಹೆಸರಿಗೆ ಕಾರಣವಾಗಿದೆ.

ಇದನ್ನು ದಕ್ಷಿಣ ಗೋವರ್ಧನಗಿರಿ ಎಂದೂ ಕರೆಯುತ್ತಾರೆ. ಹಿಮವದ್ ಗೋಪಾಲಸ್ವಾಮಿ ದೇವಾಲಯವು ಶ್ರೇಷ್ಠ ವಾಸ್ತುಶಿಲ್ಪವನ್ನು ಹೊಂದಿರುವ ಅನೇಕ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿದೆ. ಈ ದೇವಾಲಯವು ಹಿಂದಿನ ಯುಗದ ಕುಶಲಕರ್ಮಿಗಳ ವಾಸ್ತುಶಿಲ್ಪ ಹಾಗೂ ಕಲಾತ್ಮಕ ತೇಜಸ್ಸಿನ ಸಾರವಾಗಿದೆ.

ದೇವಾಲಯದ ಗೋಪುರವು ಒಂದೇ ಹಂತವನ್ನು ಹೊಂದಿದ್ದು, ಆವರಣವು ಗೋಡೆಯಿಂದ ಆವರಿಸಲ್ಪಟ್ಟಿದೆ. ಮುಖಮಂಟಪದಲ್ಲಿ ಧ್ವಜಸ್ತಂಭ ಮತ್ತು ತ್ಯಾಗಪೀಠ ಇವೆ. ಮುಖಮಂಟಪದ ಮುಂಭಾಗದ ಗೋಡಿಯ ಮೇಲೆ ದಶಾವತಾರ ಶಿಲ್ಪಗಳು ಹಾಗೂ ಕೃಷ್ಣಾವತಾರವನ್ನು ಚಿತ್ರಿಸುವ ಮಧ್ಯಭಾಗದ ಶಿಲ್ಪವಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ಶಿಖರ ಗೋಪುರವು ನಿರ್ಮಿಸಲ್ಪಟ್ಟಿದೆ.

ಭೇಟಿ ನೀಡಿ
ಗುಂಡ್ಲುಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಾಮರಾಜನಗರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section