ಹೇಮಾವತಿ ನದಿಯು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದ ಸಮೀಪದಲ್ಲಿ ಉಗಮಿಸುತ್ತದೆ. ಈ ನದಿಯು ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ ಒಂದಾಗಿದೆ. ಹೇಮಾವತಿ ನದಿಯ ಉಗಮಸ್ಥಾನದ ಸಮೀಪದಲ್ಲಿ ಶ್ರೀ ಗಣಪತಿ ದೇವಸ್ಥಾನವಿದೆ.
ಹೇಮಾವತಿ ನದಿ ಉಗಮಸ್ಥಾನದ ದೂರಗಳು
- ಬೆಂಗಳೂರು – 270 ಕಿ.ಮೀ
- ಚಿಕ್ಕಮಗಳೂರು – 58 ಕಿ.ಮೀ
- ಮೂಡಿಗೆರೆ– 28 ಕಿ.ಮೀ
- ಸಕಲೇಶಪುರ ರೈಲ್ವೆ ನಿಲ್ದಾಣ – 61 ಕಿ.ಮೀ
ಹೇಮಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿರುವ ಜಾವಳಿ ಗ್ರಾಮದ ಸಮೀಪದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1,230 ಮೀಟರ್ (4,040 ಅಡಿ) ಎತ್ತರದಲ್ಲಿ ಉಗಮಿಸುತ್ತದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಹುಟ್ಟುವ ಈ ನದಿಯು ಹಾಸನ ಜಿಲ್ಲೆಯ ಮೂಲಕ ಹರಿದು, ತನ್ನ ಪ್ರಮುಖ ಉಪನದಿಯಾದ ಯಗಚಿ ನದಿಯನ್ನು ಸೇರುತ್ತದೆ.
ನಂತರ ಹೇಮಾವತಿ ನದಿಯು ಮಂಡ್ಯ ಜಿಲ್ಲೆಯ ಮೂಲಕ ಹರಿದು, ಕೃಷ್ಣರಾಜಸಾಗರ ಜಲಾಶಯದ ಸಮೀಪದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ನದಿಯು ಸುಮಾರು 245 ಕಿ.ಮೀ. ಉದ್ದವಿದ್ದು, ಸುಮಾರು 5,410 ಚ.ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶವನ್ನು ಹೊಂದಿದೆ.


