ಗದಗ ಸರ್ಕಾರಿ ವಸ್ತು ಸಂಗ್ರಹಾಲಯ

ಗದಗ ಸರ್ಕಾರಿ ವಸ್ತುಸಂಗ್ರಹಾಲಯವು 1998ರಲ್ಲಿ ಪ್ರಾರಂಭಗೊಂಡಿತು. ಈ ಸಂಗ್ರಹಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಹೃದಯಭಾಗದಲ್ಲಿದೆ. ಇತಿಹಾಸದ ಯೋಗ್ಯ ಪ್ರತೀಕವಾಗಿರುವ ಈ ವಸ್ತುಸಂಗ್ರಹಾಲಯವು ಪ್ರಸ್ತುತ ಸುಮಾರು 700 ಪ್ರಾಚ್ಯವಸ್ತುಗಳ ಸಂಗ್ರಹವನ್ನು ಹೊಂದಿದೆ. ಪ್ರಮುಖವಾಗಿ ನಾಡಿನ ಇತಿಹಾಸವನ್ನು ಬಿಂಬಿಸುವ ಮಹತ್ವದ ಮೂರ್ತಿಶಿಲ್ಪಗಳು, ಶಾಸನಗಳು, ವೀರಗಲ್ಲುಗಳು, ಉತ್ಖನನದ ಅವಶೇಷಗಳು ಹಾಗೂ ಆಧುನಿಕ ವರ್ಣಚಿತ್ರ ಕಲಾಕೃತಿಗಳನ್ನು ಒಳಗೊಂಡಿದೆ.

ಈ ಸಂಗ್ರಹಾಲಯವು ಬೆಂಗಳೂರಿನಿಂದ 416 ಕಿ.ಮೀ ಮತ್ತು ಗದಗ ನಗರದಿಂದ ಕೇವಲ 550 ಮೀ. ದೂರದಲ್ಲಿದೆ.

ಈ ವಸ್ತುಸಂಗ್ರಹಾಲಯದಲ್ಲಿ ಇತಿಹಾಸಪೂರ್ವಕಾಲ ಹಾಗೂ ಆರಂಭಿಕ ಇತಿಹಾಸಕಾಲದ ಪ್ರಾಚ್ಯಾವಶೇಷಗಳು, ಲಕ್ಕುಂಡಿ ಗ್ರಾಮದಲ್ಲಿ ಇಲಾಖೆಯಿಂದ ಕೈಗೊಂಡ ಉತ್ಖನನ ಕಾರ್ಯದಲ್ಲಿ ದೊರೆತ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ. ನವಶಿಲಾಯುಗದ ಆಯುಧಗಳು, ಬೃಹತ್‌ಶಿಲಾಯುಗದ ಮಣ್ಣಿನ ಪಾತ್ರೆಗಳು, ಶಾತವಾಹನ ಕಾಲದ ಮಣ್ಣಿನ ಪಾತ್ರೆಗಳು ಹಾಗೂ ವಿವಿಧ ಆಕಾರ ಮತ್ತು ಬಣ್ಣಗಳ ಮಣಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಈ ವಸ್ತುಸಂಗ್ರಹಾಲಯದಲ್ಲಿ 19ನೇ ಶತಮಾನದಿಂದ 20ನೇ ಶತಮಾನವರೆಗೆ ಸೇರಿದ 50 ಬೆಳ್ಳಿಯ ನಾಣ್ಯಗಳ ಸಂಗ್ರಹವಿದೆ. ಇವುಗಳಲ್ಲಿ 34 ನಾಣ್ಯಗಳು ವಿಕ್ಟೋರಿಯಾ ರಾಣಿಯ ಕಾಲದವು, 5 ನಾಣ್ಯಗಳು ಚಕ್ರವರ್ತಿ ಎಡ್ವರ್ಡ್ VIIರ ಕಾಲದವು ಹಾಗೂ 11 ನಾಣ್ಯಗಳು ಚಕ್ರವರ್ತಿ ಜಾರ್ಜ್ Vರ ಕಾಲದವು.

ಈ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾದ ಶಾಸನಗಳಲ್ಲಿ ಕ್ರಿ.ಶ. 1007ರ ದಾನಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ನಿರ್ಮಿಸಿ ದಾನ ನೀಡಿದ ಶಾಸನವು ಪ್ರಮುಖವಾಗಿದೆ.

ಗದಗ ಜಿಲ್ಲೆಯ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಅನೇಕ ಶಿಲ್ಪಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಕಲ್ಯಾಣಚಾಲುಕ್ಯ–ಹೊಯ್ಸಳ ಶೈಲಿಯ ಸಮ್ಮಿಶ್ರಣದ ಉತ್ತಮ ಮಾದರಿಗಳಾದ ಶಿಲ್ಪಗಳು ಮತ್ತು ದೇವಾಲಯದ ಭಾಗಗಳನ್ನು ಇಲ್ಲಿ ಕಾಣಬಹುದು. ಶೈವ, ವೈಷ್ಣವ ಹಾಗೂ ಜೈನ ಧರ್ಮಗಳನ್ನು ಪ್ರತಿಬಿಂಬಿಸುವ ಅನೇಕ ಮೂರ್ತಿಶಿಲ್ಪಗಳನ್ನು ವೀಕ್ಷಿಸಬಹುದು. ಕ್ರಿ.ಶ. ಸುಮಾರು 9ನೇ ಶತಮಾನದ ರಾಷ್ಟ್ರಕೂಟರ ಕಾಲದ ಗಜಲಕ್ಷ್ಮೀ ಪಟ್ಟಿಕೆ, ಕ್ರಿ.ಶ. 11–12ನೇ ಶತಮಾನದ ಕಲ್ಯಾಣಚಾಲುಕ್ಯ ಕಾಲದ ವೀರಭದ್ರ, ಉಮಾಮಹೇಶ್ವರ, ಮಹಿಷಾಸುರಮರ್ದಿನಿ, ಕುಬೇರ, ಗರುಡ, ಸೂರ್ಯ, ವಿಷ್ಣು, ವಾಸುಕಿ, ಮಿಥುನ ಶಿಲ್ಪಗಳು, ಮಹಾವೀರ ಶಿಲ್ಪ, ಚಾಮರಧಾರಿ ಜೈನ ಶಿಲ್ಪ, ಹುನಗುಂದದಿಂದ ಸಂಗ್ರಹಿಸಲಾದ ಆದಿನಾಥ ಶಿಲ್ಪ ಹಾಗೂ ಜೈನ ತೀರ್ಥಂಕರ ಶಿಲ್ಪಗಳು ಈ ವಸ್ತುಸಂಗ್ರಹಾಲಯದ ಪ್ರಮುಖ ಆಕರ್ಷಣೆಗಳಾಗಿವೆ. ಹಾಗೆಯೇ ಅನೇಕ ವೀರಗಲ್ಲುಗಳು ಮತ್ತು ಶಾಸನಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ದಾನಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ನಿರ್ಮಿಸಲು ನೀಡಿದ ದಾನಶಾಸನ ಮತ್ತು ಡಂಬಳದಲ್ಲಿ ದೊರೆತ ಪಾರ್ಶ್ವನಾಥ ಶಿಲ್ಪದ ಪಾದಪೀಠದ ಮೇಲೆ ಬಸದಿಯ ನಿರ್ಮಾಣವನ್ನು ವಿವರಿಸುವ 10ನೇ ಶತಮಾನದ ಕನ್ನಡ ಶಾಸನ ಉಲ್ಲೇಖನೀಯವಾಗಿದೆ. ಕ್ರಿ.ಶ. 17ನೇ ಶತಮಾನದ ಮರದಲ್ಲಿ ಕೆತ್ತಲ್ಪಟ್ಟ ಗೋವರ್ಧನ ಹಾಗೂ ಲಕ್ಷ್ಮೀ ಮೂರ್ತಿಗಳನ್ನೂ ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

ಭೇಟಿ ನೀಡಿ
ಗದಗ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section