ದೊಡ್ಡಗದ್ದವಳ್ಳಿ ಲಕ್ಷ್ಮಿ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿ ಗ್ರಾಮದಲ್ಲಿರುವ ಒಂದು ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಇದನ್ನು 12ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. 1114ರಲ್ಲಿ ನಿರ್ಮಿಸಲಾಯಿತು.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 200 ಕಿ.ಮೀ, ಹಾಸನ ಪಟ್ಟಣದಿಂದ 20 ಕಿ.ಮೀ, ಬೇಲೂರಿನಿಂದ 23 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 22.3 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಚತುಷ್ಕುಟ ದೇವಾಲಯವಾಗಿದ್ದು (ಒಂದೇ ಜಗತಿಯ ಮೇಲೆ ನಾಲ್ಕು ಮುಖ್ಯ ಗರ್ಭಗುಡಿಗಳು ಮತ್ತು ನಾಲ್ಕು ಮುಖ್ಯ ಶಿಖರಗಳು), ಇಲ್ಲಿ ಕಾಲಿಮಾತೆ, ಮಹಾಲಕ್ಷ್ಮಿ, ಶಿವಲಿಂಗ ಮತ್ತು ವಿಷ್ಣುವಿನ ವಿಗ್ರಹಗಳಿವೆ. ಮೂಲ ವಿಷ್ಣು ವಿಗ್ರಹವು ಸುಮಾರು ನಾಲ್ವತ್ತು ವರ್ಷಗಳ ಹಿಂದೆ ಕಳುವಾಗಿದ್ದು, ಸದ್ಯ ಕಾಲಭೈರವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಈ ಆಲಯವು ಪೂಜೆಗೊಳ್ಳುವ ದೇವಸ್ಥಾನವಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣ (ASI) ಸಂಸ್ಥೆಯ ಸುಪರ್ದಿಗೊಳಪಡಿಸಲಾಗಿದೆ. 1958ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಕೇಂದ್ರ ಸರ್ಕಾರ ಘೋಷಿಸಿದೆ. ದೇವಾಲಯವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತೆರೆದಿರುತ್ತದೆ.
ಈ ದೇವಾಲಯವು ತನ್ನ ಸೊಗಸಾದ ನಕ್ಷತ್ರಾಕಾರದ ವಾಸ್ತುಶಿಲ್ಪ, ಹೊಯ್ಸಳರ ವಿಶಿಷ್ಟ ಕುಶಲತೆ, ಸೂಕ್ಷ್ಮವಾಗಿ ಕೆತ್ತಿದ ಕಲ್ಲಿನ ಕಂಬಗಳು ಮತ್ತು ಶಿಲ್ಪಗಳಿಂದ ಪ್ರಸಿದ್ಧವಾಗಿದೆ. ಮಹಾಲಕ್ಷ್ಮಿ ದೇವಿಗೆ ಸಮರ್ಪಿತವಾಗಿರುವುದರಿಂದ, ಭಕ್ತರು ಆಕೆಯ ಆಶೀರ್ವಾದವನ್ನು ಪಡೆಯಲು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದರ ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ಪ್ರಾಮುಖ್ಯತೆ ಕಾರಣದಿಂದ, ಇದು ಕರ್ನಾಟಕದ ಇತಿಹಾಸ ಹಾಗೂ ಕಲೆಯನ್ನು ಆಸ್ವಾದಿಸುವವರಿಗಾಗಿ ಭೇಟಿ ನೀಡಬೇಕಾದ ತಾಣವಾಗಿದೆ.
ಭೇಟಿ ನೀಡಿ






