ಕದಂಬೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಇರುವ ಪುರಾತನ ದೇವಾಲಯವಾಗಿದೆ. ಇದು ಕುಮುದ್ವತಿ ನದಿಯ ದಂಡೆಯ ಮೇಲೆ ಸ್ಥಿತವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯವು 11ನೇ ಶತಮಾನದ ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದ್ದು, ಆ ಕಾಲದ ಶಿಲ್ಪಕಲೆಯ ವೈಭವವನ್ನು ಪ್ರತಿಬಿಂಬಿಸುತ್ತದೆ.
ರಟ್ಟೀಹಳ್ಳಿ ಕದಂಬೇಶ್ವರ ದೇವಾಲಯದ ದೂರಗಳು
- ಬೆಂಗಳೂರು – 326 ಕಿ.ಮೀ
- ಹಾವೇರಿ – 58 ಕಿ.ಮೀ
- ರಟ್ಟೀಹಳ್ಳಿ – 1 ಕಿ.ಮೀ
- ರಾಣೇಬೆನ್ನೂರು ರೈಲ್ವೆ ನಿಲ್ದಾಣ – 30 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 60 ಕಿ.ಮೀ
ಇತಿಹಾಸ
ಕದಂಬೇಶ್ವರ ದೇವಾಲಯವು ಕ್ರಿ.ಶ. 11ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿತಗೊಂಡ ಸುಂದರ ತ್ರಿಕೂಟಾಚಲ ದೇವಾಲಯವಾಗಿದೆ. ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ಉದಾಹರಣೆಯಾದ ಈ ದೇವಾಲಯವನ್ನು ಶಾಸನಗಳಲ್ಲಿ “ಕದಂಬೇಶ್ವರ” ಎಂದು ಉಲ್ಲೇಖಿಸಲಾಗಿದೆ.
ತಲವಿನ್ಯಾಸದ ದೃಷ್ಟಿಯಿಂದ, ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳು ಮತ್ತು ಅವುಗಳಿಗೆ ಸಂಪರ್ಕಿಸಿದ ಮೂರು ಅಂತರಾಳಗಳಿವೆ. ಇವುಗಳಿಗೆ ಹೊಂದಿಕೊಂಡಂತೆ ವಿಶಾಲವಾದ ನವರಂಗ ಹಾಗೂ ಮುಂಭಾಗದಲ್ಲಿ ಕಂಬಗಳಿಂದ ಅಲಂಕೃತಗೊಂಡ ತೆರೆದ ಸಭಾಮಂಟಪವಿದೆ.
ಮುಖ್ಯ ಗರ್ಭಗೃಹದ ಬಾಗಿಲು ಪಂಚಶಾಖಾ ಅಲಂಕರಣ ಹೊಂದಿದ್ದು, ಅದರ ತಲೆಯ ಭಾಗದಲ್ಲಿ ತಲೆಕೆಳಗಿನ ತಾವರೆ ಮೊಗ್ಗಿನ ಆಕಾರದ ಶಿಲ್ಪವಿದೆ. ಕಮಾನಿನಾಕಾರದ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವು ಕಾಣುತ್ತದೆ. ಗರ್ಭಗೃಹದ ಒಳಗೆ ಕಲ್ಯಾಣಿ ಚಾಲುಕ್ಯ ಶೈಲಿಯ ಪಾಣಿಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪಿತವಾಗಿದೆ. ಅಂತರಾಳದ ಬಾಗಿಲುಗಳಲ್ಲಿಯೂ ಪಂಚಶಾಖಾ ಅಲಂಕರಣವಿದೆ. ಉಳಿದ ಎರಡು ಗರ್ಭಗೃಹಗಳಲ್ಲಿಯೂ ಶಿವಲಿಂಗಗಳಿವೆ.
ನವರಂಗದ ಮಧ್ಯದಲ್ಲಿರುವ ನಾಲ್ಕು ಬೃಹದಾಕಾರದ ಕಂಬಗಳು ಕಲ್ಯಾಣಿ ಚಾಲುಕ್ಯ ಶೈಲಿಯ ವೈಶಿಷ್ಟ್ಯವನ್ನು ತೋರಿಸುತ್ತವೆ. ನವರಂಗದ ಪೂರ್ವಭಾಗದ ಪ್ರವೇಶದ್ವಾರದ ಬಳಿ ನಂದಿಯ ಏಕಶಿಲಾ ವಿಗ್ರಹವಿದೆ.
24 ಕಂಬಗಳಿಂದ ನಿರ್ಮಿತವಾದ ವಿಶಾಲ ಸಭಾಮಂಟಪಕ್ಕೆ ಪ್ರತ್ಯೇಕ ಮುಖಮಂಟಪಗಳೊಂದಿಗೆ ಮೂರು ಪ್ರವೇಶದ್ವಾರಗಳಿವೆ. ನವರಂಗದ ಪ್ರವೇಶದ್ವಾರದ ಮೇಲ್ಭಾಗದಲ್ಲಿ ಚಾಮರಧಾರಿಣಿಯರು, ಗಣೇಶ, ನಾಟ್ಯಶಿವ, ವಿಷ್ಣು ಮತ್ತು ಮಹಿಷಾಸುರಮರ್ಧಿನಿ ಮುಂತಾದ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ಭವ್ಯ ಶಿಲ್ಪಗಳು ಗಮನ ಸೆಳೆಯುತ್ತವೆ.
ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಗಣಪತಿ ಮತ್ತು ದುರ್ಗೆಯ ಶಿಲ್ಪಗಳಿವೆ. ಮೂರು ಗರ್ಭಗೃಹಗಳ ಮೇಲ್ಭಾಗದಲ್ಲಿ ಸುಖನಾಸ ಮತ್ತು ದ್ರಾವಿಡ ಶೈಲಿಯ ಶಿಖರಗಳಿದ್ದು, ಅವುಗಳಲ್ಲಿ ನಟರಾಜ, ಆಸೀನ ಶಿವ, ಚತುರ್ಭುಜ ಶಿವ, ಭೈರವ ಮುಂತಾದ ದೇವತೆಗಳ ಸುಂದರ ಕಿರುಶಿಲ್ಪಗಳು ಅಲಂಕರಿಸುತ್ತವೆ.
ಭೇಟಿ ನೀಡಿ













