ನಮ್ಮ ಪುರಾಣಗಳ ಪ್ರಕಾರ, ಭೂಮಿಯ ಮೇಲೆ 108 ತಿರುಪತಿಗಳು ಇದ್ದು, ಈ ಎಲ್ಲ ಪುಣ್ಯಸ್ಥಳಗಳಲ್ಲಿ ವಿಷ್ಣುವು ವೆಂಕಟೇಶ್ವರನ ಸೌಮ್ಯ ರೂಪದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅಂತಹ ಪವಿತ್ರ ತಿರುಪತಿಗಳಲ್ಲಿ ಬಂಗಾರು ತಿರುಪತಿಯೂ ಒಂದು ಪ್ರಮುಖ ಕ್ಷೇತ್ರವಾಗಿದೆ. ಇಲ್ಲಿ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಪದ್ಮಾವತಿ ಸಮೇತವಾಗಿ ಶ್ರೀನಿವಾಸನು ನೆಲೆಸಿದ್ದಾನೆ.
ಈ ಕ್ಷೇತ್ರವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿದೆ. ಇಲ್ಲಿನ ಬೆಟ್ಟಗುಡ್ಡ ಪ್ರದೇಶದಲ್ಲಿ ತಿರುಪತಿ ಸ್ವಾಮಿಯು ನೆಲೆಸಿದ್ದು, ಭಕ್ತಿಭಾವ ಮತ್ತು ದೈವೀ ಸಾನ್ನಿಧ್ಯದ ಕಾರಣದಿಂದ ಈ ಸ್ಥಳವು ಒಂದು ಪ್ರಮುಖ ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿದೆ.
ಗುಟ್ಟಹಳ್ಳಿ ಬಂಗಾರು ತಿರುಪತಿ ದೇವಸ್ಥಾನದ ದೂರಗಳು
- ಬೆಂಗಳೂರು – 103 ಕಿ.ಮೀ
- ಕೋಲಾರ – 57 ಕಿ.ಮೀ
- ಕೆಜಿಎಫ್ – 19 ಕಿ.ಮೀ
- ಕೆಜಿಎಫ್ ಬಿಇಎಂಎಲ್ ರೈಲ್ವೆ ನಿಲ್ದಾಣ – 17 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 103 ಕಿ.ಮೀ
ಈ ಸ್ಥಳವು ಪುರಾಣ ಕಾಲದಿಂದಲೂ ಭೃಗು ಮಹರ್ಷಿಗಳ ಧ್ಯಾನಸ್ಥಳವಾಗಿತ್ತು ಎಂದು ನಂಬಲಾಗಿದೆ. ಈ ಕ್ಷೇತ್ರದಲ್ಲಿ ಶ್ರೀನಿವಾಸ ದೇವರು ಒಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಲಕ್ಷ್ಮೀ ಮತ್ತು ಪದ್ಮಾವತಿ ದೇವಿಯರು ಮತ್ತೊಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ದೇವರು ಇಲ್ಲಿ ಏಕಾಂತವಾಗಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಅದರಿಂದಲೇ ಈ ದೇವರನ್ನು “ಏಕಾಂತ ಶ್ರೀನಿವಾಸ” ಎಂದು ಕರೆಯಲಾಗುತ್ತದೆ.
ಇಲ್ಲಿಗೆ ಬರುವ ಭಕ್ತರು ಮೊದಲು ಏಕಾಂತ ಶ್ರೀನಿವಾಸ ದೇವಾಲಯಕ್ಕೆ ಭೇಟಿ ನೀಡಿ, ನಂತರ ಪದ್ಮಾವತಿ ದೇವಿಯ ದೇವಾಲಯಕ್ಕೆ ಭೇಟಿ ನೀಡುವುದು ಇಲ್ಲಿನ ಸಂಪ್ರದಾಯವಾಗಿದೆ. ಇಲ್ಲಿ ನೆಲೆಸಿರುವ ಶ್ರೀನಿವಾಸ ದೇವರನ್ನು ಉಡುಪಿಯ ಶ್ರೀಕೃಷ್ಣನನ್ನು ಕನಕನ ಕಿಂಡಿಯಲ್ಲಿ ನೋಡುವಂತೆ ದರ್ಶನ ಮಾಡಬೇಕು. ಶ್ರೀನಿವಾಸನನ್ನು ಹೀಗೆ ನೋಡುವುದನ್ನು “ನೇತ್ರ ದರ್ಶನ” ಎಂದು ಕರೆಯುತ್ತಾರೆ.
ಭೇಟಿ ನೀಡಿ






