ಪುರಾತನ ಹೊಯ್ಸಳ ಶ್ರೀ ಪಾರ್ಥಸಾರಥಿ (ಗೋಪಾಲಕೃಷ್ಣ) ಸ್ವಾಮಿ ದೇವಸ್ಥಾನ

ಶ್ರೀ ಪಾರ್ಥಸಾರಥಿ (ಗೋಪಾಲಕೃಷ್ಣ) ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಪುಟ್ಟ ಗ್ರಾಮವಾದ ಕೆರೆತೊಣ್ಣೂರಿನಲ್ಲಿ (ತೊಂಡನೂರು) ಇರುವ ಪುರಾತನ ದೇವಾಲಯವಾಗಿದೆ.

ದೇವಾಲಯದ ಮುಂಭಾಗದ ರಸ್ತೆಯ ಇನ್ನೊಂದು ಬದಿಯಲ್ಲಿ ಪ್ರಸಿದ್ಧ ನಂಬಿ ನಾರಾಯಣ ದೇವಸ್ಥಾನವೂ ಇದೆ. ಈ ಪ್ರದೇಶವನ್ನು ಇಂದಿನ ದಿನಗಳಲ್ಲಿ ತೊಂಡನೂರು ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನು ನಿರ್ಮಿಸಿದನೆಂದು ನಂಬಲಾಗಿದೆ. ತೊಂಡನೂರು ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಂಚ ನಾರಾಯಣ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕೆರೆತೊಣ್ಣೂರು ಪುರಾತನ ಹೊಯ್ಸಳ ಶ್ರೀ ಪಾರ್ಥಸಾರಥಿ ದೇವಾಲಯದ ದೂರಗಳು

  • ಬೆಂಗಳೂರು – 138 ಕಿ.ಮೀ
  • ಮಂಡ್ಯ – 34 ಕಿ.ಮೀ
  • ಪಾಂಡವಪುರ – 9 ಕಿ.ಮೀ
  • ಪಾಂಡವಪುರ ರೈಲ್ವೆ ನಿಲ್ದಾಣ – 12 ಕಿ.ಮೀ
  • ಮೈಸೂರು ವಿಮಾನ ನಿಲ್ದಾಣ – 52 ಕಿ.ಮೀ

ಈ ದೇವಾಲಯವು ಬೆಳ್ಳಿಗ್ಗೆ 7:30 ರಿಂದ ಮದ್ಯಾಹ್ನ12:00 ರವರೆಗೆ ಮತ್ತು ಸಂಜೆ 4:00  ಮತ್ತು ರಾತ್ರಿ 7:30  ರ ವರೆಗೆ ತೆರೆದಿರುತ್ತದೆ.

ಶ್ರೀ ಪಾರ್ಥಸಾರಥಿ (ಗೋಪಾಲಕೃಷ್ಣ) ಸ್ವಾಮಿ ದೇವಸ್ಥಾನವು ಸುಮಾರು 1000 ವರ್ಷಗಳ ಇತಿಹಾಸವನ್ನು ಹೊಂದಿರುವ, ಹೊಯ್ಸಳರ ಕಾಲದ ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ಶ್ರೀಕೃಷ್ಣನ ನಿಂತಿರುವ ಭಂಗಿಯ ವಿಗ್ರಹವನ್ನು ಕೆತ್ತಲಾಗಿದೆ. ಈ ವಿಗ್ರಹವನ್ನು ಧರ್ಮರಾಜ ಮತ್ತು ಋಷಿ ಬೃಗು ಪ್ರತಿಷ್ಠಾಪಿಸಿದ್ದಾರೆ ಎಂಬ ನಂಬಿಕೆಯಿದೆ. ದೇವಾಲಯದಲ್ಲಿ ಯಾದವನಾಯಕಿಯ ಪ್ರತಿಮೆಯೂ ಇದೆ.

ಈ ದೇವಾಲಯದ ವಿಶೇಷತೆ ಎಂದರೆ, ನರ್ತಿಸುವ ರೂಪದಲ್ಲಿರುವ ಗೋಪಾಲಕೃಷ್ಣನ ಪ್ರತಿಮೆ. ಇಲ್ಲಿ ಎಡಗಾಲು ಮುಂಭಾಗದಲ್ಲಿ ಇರುವಂತೆ ಕೆತ್ತಲಾಗಿದೆ, ಇದು ಅಪರೂಪದ ವಿನ್ಯಾಸವಾಗಿದೆ; ಸಾಮಾನ್ಯವಾಗಿ ಇತರ ದೇವಾಲಯಗಳಲ್ಲಿ ಬಲಗಾಲು ಮುಂಭಾಗದಲ್ಲಿ ಇರುತ್ತದೆ.

ದೇವಾಲಯದಲ್ಲಿ ಕಲ್ಲಿನ ಉಯ್ಯಾಲೆಯಿದ್ದು, ಅದನ್ನು ಉತ್ಸವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ದೇವಾಲಯವು ಪೂರ್ವಾಭಿಮುಖವಾಗಿದ್ದು, ಪೂರ್ವ ದಿಕ್ಕಿನಿಂದಲೇ ಪ್ರವೇಶವಿದೆ. ಪ್ರವೇಶದ್ವಾರದ ನಂತರ ಬಲಭಾಗದಲ್ಲಿ ಮಂಟಪವಿದೆ. ದೇವಾಲಯದ ಮುಂಭಾಗದಲ್ಲಿ ಬಲಿಪೀಠವಿದೆ. ಗರ್ಭಗುಡಿಯ ಪ್ರವೇಶದ್ವಾರದ ಎರಡೂ ಬದಿಗಳಲ್ಲಿ ವಿಜಯನಗರ ಕಾಲದ ಚಿತ್ರಗಳು ಕಾಣಿಸಿಕೊಳ್ಳುತ್ತವೆ.

ದೇವಾಲಯದ ರಚನೆ ಗರ್ಭಗುಡಿ, ಅಂತರಾಳ (ಸುಖನಾಸಿ), ನವರಂಗ ಮಂಟಪ ಮತ್ತು ಮಹಾಮಂಟಪಗಳನ್ನು ಒಳಗೊಂಡಿದೆ. ಗರ್ಭಗುಡಿಯು ಪಾದಬಂಧ ಅಧಿಷ್ಠಾನದ ಮೇಲೆ ನಿರ್ಮಿತವಾಗಿದ್ದು, ಮೂರು ಪಟ್ಟ ಕುಮುದ ಮತ್ತು ಪಟ್ಟಿಕವನ್ನು ಹೊಂದಿದೆ. ಗರ್ಭಗುಡಿಯ ಮೇಲ್ಭಾಗದಲ್ಲಿ ಏಕತಾಳದ ದ್ರಾವಿಡ ಶೈಲಿಯ ಗೋಪುರವಿದೆ.

ಶಾಸನಗಳ ಪ್ರಕಾರ, ಹೊಯ್ಸಳ ನರಸಿಂಹನು ಕೊಡಲ್ನಾಡನ್ನು ಆಳುತ್ತಿದ್ದಾಗ ನಾರಾಯಣ ದೇವರಿಗೆ ನೀಡಿದ ದತ್ತಿ ಮತ್ತು ದಾನಗಳ ವಿವರಗಳು ದೊರೆಯುತ್ತವೆ. ದಂತಕಥೆಯ ಪ್ರಕಾರ, ಶ್ರೀ ರಾಮಾನುಜರು ತೊಂಡನೂರಿನಲ್ಲಿ ವಾಸವಿದ್ದು, ಈ ದೇವಾಲಯದಲ್ಲೂ ಉಳಿದುಕೊಂಡಿದ್ದರು ಹಾಗೂ ನಂಬಿ ನಾರಾಯಣಸ್ವಾಮಿ ದೇವಾಲಯದ ಪುನರ್ನಿರ್ಮಾಣದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ.

ಮೈಸೂರು ರಾಜರ ಕಾಲದಲ್ಲಿ ಈ ದೇವಾಲಯವನ್ನು “ಯಾದವ ನಾರಾಯಣ-ವಸಂತ ಗೋಪಾಲ” ಎಂದು ಕರೆಯಲಾಗುತ್ತಿತ್ತು.

ಭೇಟಿ ನೀಡಿ
ಪಾಂಡವಪುರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section