ಸಾದಹಳ್ಳಿ ಕಲ್ಲುಗಣಿ ದೇವಸ್ಥಾನ

ಸಾದಹಳ್ಳಿ ಕಲ್ಲುಗಣಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದಲ್ಲಿರುವ ದೇವಾಲಯವಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಈ ಪ್ರದೇಶವು ಕಲ್ಲುಗಣಿ (ಕ್ವಾರಿ) ಚಟುವಟಿಕೆಗಳಿಂದ ಪ್ರಸಿದ್ಧಿಯಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸಾದಹಳ್ಳಿಯಲ್ಲಿ, ವಿಶಾಲವಾದ ಕಲ್ಲುಗಣಿಯ ಮಧ್ಯಭಾಗದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಸಾದಹಳ್ಳಿ ಕ್ವಾರಿ ದೇವಸ್ಥಾನದ ದೂರಗಳು

  • ಬೆಂಗಳೂರು – 29 ಕಿ.ಮೀ
  • ದೇವನಹಳ್ಳಿ – 12 ಕಿ.ಮೀ
  • ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ – 10 ಕಿ.ಮೀ
  • ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್‌ಗೇಟ್‌ – 5 ಕಿ.ಮೀ

ಈ ಕ್ವಾರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ಸುಮಾರು 200 ಮೀಟರ್ ಆಳದವರೆಗೆ ಅಗೆದಿದ್ದಾರೆ. ಈ ದೇವಾಲಯವು ಸಾಮಾನ್ಯ ದೇವಾಲಯಗಳಿಗಿಂತ ಭಿನ್ನವಾಗಿದೆ. ಸುತ್ತಲಿನ ಪ್ರದೇಶವನ್ನು ಆಳವಾಗಿ ಅಗೆದಿರುವುದರಿಂದ, ಇದು ಈಗ ಗ್ರಾನೈಟ್ ಗೋಪುರದಂತೆ ಕಾಣುತ್ತದೆ. ಕಲ್ಲುಗಣಿಯ ಮಧ್ಯಭಾಗದಲ್ಲಿರುವ ದೇವಾಲಯವನ್ನು ಯಥಾಸ್ಥಿತಿಯಲ್ಲೇ ಉಳಿಸಲಾಗಿದೆ ಎಂಬುದು ತಿಳಿದಾಗ ಇನ್ನಷ್ಟು ಆಶ್ಚರ್ಯವಾಗುತ್ತದೆ. ಶಿವನ ಒಂದು ರೂಪವಾದ ಮುನೇಶ್ವರ ದೇವರಿಗೆ ಸಮರ್ಪಿತವಾದ ಈ ದೇವಾಲಯವು ನೀಲಿ ಬಣ್ಣದಿಂದ ಅಲಂಕರಿಸಲ್ಪಟ್ಟಿದ್ದು, ಮೂಲ ಬೆಟ್ಟದ ಮೇಲೆಯೇ ನಿಂತಿದೆ.

ಕಲ್ಲುಗಣಿಯ ಮಧ್ಯಭಾಗದಲ್ಲಿರುವ ಈ ದೇವಾಲಯಕ್ಕೆ ಕಲ್ಲುಗಣಿ ಪ್ರದೇಶದ ಅಂಚಿನಿಂದ ಸಂಪರ್ಕ ಕಲ್ಪಿಸುವ ದಾರಿಯಿದೆ. ಇದು ಖಾಸಗಿ ಆಸ್ತಿಯಾಗಿದ್ದರೂ, ದೇವಾಲಯದ ದರ್ಶನಕ್ಕಾಗಿ ಈ ಸ್ಥಳಕ್ಕೆ ಪ್ರವೇಶವನ್ನು ಅನುಮತಿಸಲಾಗುತ್ತದೆ.

ದೇವಾಲಯಕ್ಕೆ ಹೋಗಲು ಸುಮಾರು ಮೂರು ಅಡಿ ಅಗಲದ ಸೇತುವೆಯಂತಿರುವ ಗ್ರಾನೈಟ್ ಗೋಡೆಯಿದೆ. ಈ ಕಿರಿದಾದ ಮಾರ್ಗದಲ್ಲಿ ನಡೆಯುವುದು ಸ್ವಲ್ಪ ಭಯಾನಕ ಅನುಭವವನ್ನು ನೀಡುತ್ತದೆ. ದೇವಾಲಯವನ್ನು ತಲುಪಲು ಭಕ್ತರು ಮತ್ತು ಪ್ರವಾಸಿಗರು ಒಬ್ಬೊಬ್ಬರಾಗಿ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಸ್ಥಳವು ಸುತ್ತಮುತ್ತಲಿನ ಪ್ರದೇಶಕ್ಕಿಂತ ಎತ್ತರದಲ್ಲಿರುವುದರಿಂದ, ನಗರದ ಗದ್ದಲದಿಂದ ದೂರವಾಗಿ ಪ್ರಕೃತಿಯನ್ನು ಆಸ್ವಾದಿಸಲು ಮತ್ತು ಸುತ್ತಮುತ್ತಲಿನ ದೃಶ್ಯಗಳನ್ನು ವೀಕ್ಷಿಸಲು ಉತ್ತಮ ತಾಣವಾಗಿದೆ. ಈ ಸ್ಥಳವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಮಳೆಗಾಲದಲ್ಲಿ ಕ್ವಾರಿಯಲ್ಲಿ ಸಂಗ್ರಹವಾಗುವ ನೀರು ಕಲ್ಯಾಣಿಯಂತೆ ಕಾಣುವ ಸಣ್ಣ ಸಣ್ಣ ಕೊಳಗಳನ್ನು ಎರಡೂ ಬದಿಗಳಲ್ಲಿ ಸೃಷ್ಟಿಸುತ್ತದೆ. ಗ್ರಾನೈಟ್ ಕಲ್ಲಿನ ಬಿಳಿ ಬಣ್ಣದ ಹಿನ್ನೆಲೆಯೊಂದಿಗೆ ಈ ಇಡೀ ಸ್ಥಳವು ಅತ್ಯಂತ ರಮಣೀಯವಾಗಿ ಕಾಣುತ್ತದೆ.

ಭೇಟಿ ನೀಡಿ
ದೇವನಹಳ್ಳಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section