ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ನಾಗಲಾಪುರ ಗ್ರಾಮದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಪುರಾತನ ದೇವಾಲಯವಾಗಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಎರಡು ಪ್ರಮುಖ ದೇವಾಲಯಗಳಿವೆ. ಅವುಗಳಲ್ಲಿ ಇನ್ನೊಂದು ಎಂದರೆ ಚೆನ್ನಕೇಶವ ದೇವಾಲಯ.
ಶ್ರೀ ಕೇದಾರೇಶ್ವರ ಸ್ವಾಮಿ ದೇವಸ್ಥಾನ ನಾಗಲಾಪುರದ ದೂರಗಳು
- ಬೆಂಗಳೂರು – 124 ಕಿ.ಮೀ
- ತುಮಕೂರು – 72 ಕಿ.ಮೀ
- ತುರುವೇಕೆರೆ – 12 ಕಿ.ಮೀ
- ಕೆಬಿ ಕ್ರಾಸ್ – 29 ಕಿ.ಮೀ
- ಬಾಣಸಂದ್ರ ರೈಲ್ವೆ ನಿಲ್ದಾಣ –24 ಕಿ.ಮೀ
ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿ ಗರ್ಭಗೃಹ, ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ದೇವಾಲಯಕ್ಕೆ ದಕ್ಷಿಣ ದಿಕ್ಕಿನಿಂದ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ. ಚೌಕಾಕಾರದ ಗರ್ಭಗುಡಿಯ ಮಧ್ಯಭಾಗದಲ್ಲಿ ಸಣ್ಣಗಾತ್ರದ ಕೇದಾರೇಶ್ವರ ಲಿಂಗವಿದೆ.
ಅಂತರಾಳದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಶಿಲ್ಪಗಳು ಹಾಗೂ ಮಧ್ಯದಲ್ಲಿ ತಾಂಡವೇಶ್ವರನ ಸುಂದರ ಶಿಲ್ಪವಿದೆ. ಸುಕನಾಸಿಯ ಬಾಗಿಲಿನ ಎರಡೂ ಬದಿಗಳಲ್ಲೂ ಉಮಾಮಹೇಶ್ವರ ಮತ್ತು ನಟರಾಜರ ಆಕರ್ಷಕ ಕೆತ್ತನೆಗಳನ್ನು ಕಾಣಬಹುದು.
ನವರಂಗದಲ್ಲಿ ನವಿರಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ನಾಲ್ಕು ಕಂಬಗಳಿದ್ದು, ಅವುಗಳ ಮೇಲಿನ ಮಣಿಸರಗಳು ಆ ಕಾಲದ ಶಿಲ್ಪಕಲಾ ಕೌಶಲ್ಯದ ಪ್ರತಿಬಿಂಬವಾಗಿವೆ. ನವರಂಗದ ಮಧ್ಯದ ಭುವನೇಶ್ವರಿ ಅತ್ಯಂತ ಕಲಾತ್ಮಕವಾಗಿ ಮೂಡಿಬಂದಿದ್ದು, ಅದರ ಸುತ್ತ ಅಷ್ಟದಿಕ್ಪಾಲಕರು, ಯಕ್ಷ-ಯಕ್ಷಿಯರು ವಲಯ ರಚಿಸಿದ್ದಾರೆ. ಮಧ್ಯದಲ್ಲಿ ಬೃಹತ್ ಕಮಲದ ಕೆತ್ತನೆಯೂ ಇದೆ.
ದೇವಾಲಯದ ಒಳಾಂಗಣದ ಬದಿಗಳಲ್ಲಿ ಗಣೇಶ, ಸೂರ್ಯ, ಮಹಿಷಾಸುರಮರ್ದಿನಿ ಹಾಗೂ ನಂದಿಯ ಶಿಲ್ಪಗಳನ್ನು ಕಾಣಬಹುದು. ದೇವಾಲಯದ ಹೊರಭಾಗವು ನಕ್ಷತ್ರಾಕಾರದ ತಳಹದಿಯನ್ನು ಹೊಂದಿದ್ದು, ಸುತ್ತಲೂ ಪ್ರದಕ್ಷಿಣೆ ಮಾಡಲು ಅನುಕೂಲವಾಗುವ ಜಗುಲಿ ವ್ಯವಸ್ಥೆ ಇದೆ. ಭಕ್ತರು ಮತ್ತು ಪ್ರವಾಸಿಗರು ಸುಲಭವಾಗಿ ವಿಗ್ರಹಗಳನ್ನು ವೀಕ್ಷಿಸಬಹುದು.
ಭೇಟಿ ನೀಡಿ




