ಗಂಗಾಧರೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿರುವ ಹೊಯ್ಸಳರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಶಿವಲಿಂಗವು ಅನೇಕ ಲಿಂಗಗಳಲ್ಲಿ ವಿಶಿಷ್ಟವಾಗಿದೆ. ಇಲ್ಲಿನ ವಿಶೇಷತೆ ಎಂದರೆ, ಶಿವನ ವಿಗ್ರಹವು ತನ್ನ ತಲೆಯ ಮೇಲೆ ಗಂಗೆಯನ್ನು ಧರಿಸಿರುವ ರೂಪದಲ್ಲಿ ಕೆತ್ತಲ್ಪಟ್ಟಿದೆ. ಜೊತೆಗೆ ಪ್ರಭಾವಲಿಯ ಆಕಾರದಲ್ಲಿ ಹರಿಯುವ ನೀರಿನ ಕಾರಂಜಿಗಳಂತಹ ವಿನ್ಯಾಸಗಳನ್ನು ಕಾಣಬಹುದು.
ತುರುವೇಕೆರೆ ಗಂಗಾದರೇಶ್ವರ ದೇವಸ್ಥಾನದ ದೂರಗಳು
- ಬೆಂಗಳೂರು – 123 ಕಿ.ಮೀ
- ತುಮಕೂರು – 63 ಕಿ.ಮೀ
- ತುರುವೇಕೆರೆ – 1 ಕಿ.ಮೀ
- ಕೆಬಿ ಕ್ರಾಸ್ – 17 ಕಿ.ಮೀ
- ಬಾಣಸಂದ್ರ ರೈಲ್ವೆ ನಿಲ್ದಾಣ – 12 ಕಿ.ಮೀ
ಗಂಗಾಧರೇಶ್ವರ ದೇವಸ್ಥಾನದ ಮುಖಮಂಟಪದಲ್ಲಿರುವ ನಂದಿಯು ಅತ್ಯಂತ ಅದ್ಭುತವಾಗಿದೆ. ಬಳಪದ ಕಲ್ಲಿನಲ್ಲಿ ನಿರ್ಮಿಸಲಾದ ಸುಮಾರು ಏಳು ಅಡಿ ಎತ್ತರದ ಈ ನಂದಿ, ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಮೊಣಕಾಲು ಮಡಚಿ ಕುಳಿತು ನೋಡುವ ಭಂಗಿಯಲ್ಲಿ ಕೆತ್ತಲಾಗಿದೆ. ನಂದಿಯ ಮೇಲ್ಮೈ ಹೊಳೆಯುತ್ತಿದ್ದು, ಕನ್ನಡಿಯಂತೆ ಮಿನುಗುತ್ತದೆ.
ನಂದಿಯ ಶಿರಸ್ಸಿನ ಮೇಲೆ ಧರಿಸಿರುವ ಗೆಜ್ಜೆಸರ, ಆಭರಣಗಳು, ಗಂಟಾನಾದದ ಅಲಂಕಾರಗಳು, ಬೆನ್ನಿನ ಭಾಗದಲ್ಲಿರುವ ನುಣ್ಣನೆಯ ಸರಪಳಿ ಮುಂತಾದ ಶಿಲ್ಪಕಲೆಗಳು ನೋಡುಗರನ್ನು ಚಕಿತಗೊಳಿಸುತ್ತವೆ. ನಂದಿಯ ಕೊರಳಲ್ಲಿ ಇಷ್ಟಲಿಂಗವೂ ಕಾಣುತ್ತದೆ.
ದೇವಾಲಯದಲ್ಲಿರುವ ಅಮ್ಮನವರ ಸನ್ನಿಧಿಯಲ್ಲಿ ಪಾರ್ವತಿಯ ಮೂರ್ತಿಯಿದ್ದು, ಈ ದೇವಿಯನ್ನು “ಆಧಾರಶಕ್ತಿ” ಎಂದು ಕರೆಯುತ್ತಾರೆ. ಆಧಾರಶಕ್ತಿ ದೇವಿಯ ಮೂರ್ತಿ ತಪೋಭಂಗಿಯಲ್ಲಿ ಕಾಣಿಸಿಕೊಳ್ಳುತ್ತದೆ. ದೇವಿಯ ಹಣೆಯಲ್ಲಿ ಮೂರನೇ ಕಣ್ಣು ಇದ್ದು, ಅಭಯ, ವರದ, ಪಾಶ ಮತ್ತು ಅಂಕುಶಗಳನ್ನು ಧರಿಸಿರುವ ಈ ಮೂರ್ತಿ ತಪಸ್ಸಿನ ಭಂಗಿಯನ್ನು ಪ್ರತಿಬಿಂಬಿಸುತ್ತದೆ. ಇದೂ ಸಹ ಅಪರೂಪದ ಶಿಲ್ಪಕಲೆಯ ಉದಾಹರಣೆಯಾಗಿದೆ.
ಭೇಟಿ ನೀಡಿ




