ಮದಲಿಂಗನ ಕಣಿವೆವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿರುವ ಸುಂದರ ಅರಣ್ಯ–ಘಟ್ಟ ಪ್ರದೇಶವಾಗಿದೆ. ಈ ಕಣಿವೆಯು ಚಿಕ್ಕನಾಯಕನಹಳ್ಳಿ ಮತ್ತು ಹಾಗಲವಾಡಿ ನಡುವಿನ ಮುಖ್ಯ ರಸ್ತೆಯಲ್ಲಿದ್ದು, ತನ್ನ ಹಚ್ಚಹಸಿರು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ತುಮಕೂರು ಜಿಲ್ಲೆಯ ಪ್ರಮುಖ ಪರ್ವತಶ್ರೇಣಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಮದಲಿಂಗನ ಕಣಿವೆಯು ನೈಸರ್ಗಿಕ ಸೌಂದರ್ಯ, ಶಾಂತ ವಾತಾವರಣ ಹಾಗೂ ಸ್ಥಳೀಯ ಜಾನಪದ ಕಥೆಗಳಿಗಾಗಿ ಪ್ರಸಿದ್ಧವಾಗಿದೆ. ಬೆಟ್ಟಗಳು, ಕಾಡು ಪ್ರದೇಶಗಳು ಮತ್ತು ಮನಮೋಹಕ ದೃಶ್ಯಾವಳಿಗಳಿಂದ ಕೂಡಿರುವ ಈ ತಾಣವು ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು ಹಾಗೂ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ.
ಮದಲಿಂಗನ ಕಣಿವೆಯ ದೂರಗಳು
- ಬೆಂಗಳೂರು – 142 ಕಿ.ಮೀ
- ತುಮಕೂರು – 73 ಕಿ.ಮೀ
- ಚಿಕ್ಕನಾಯಕನಹಳ್ಳಿ – 10 ಕಿ.ಮೀ
- ಬಾಣಸಂದ್ರ ರೈಲ್ವೆ ನಿಲ್ದಾಣ – 27 ಕಿ.ಮೀ
ಮದಲಿಂಗನ ಕಣಿವೆಯಾ ಬಗ್ಗೆ ಒಂದು ಜನಪದೀಯ ಕಥೆ
ಮದಲಿಂಗನ ಕಣಿವೆಗೆ ಈ ಹೆಸರು ಬರಲು ಒಂದು ಪ್ರಸಿದ್ಧ ಸ್ಥಳೀಯ ಜನಪದ ಕಥೆಯಿದೆ. ಈ ಕಥೆಯು ಮದಲಿಂಗ ಎಂಬ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದೆ.
ಜನಪದ ಕಥೆಯ ಪ್ರಕಾರ, ಮದಲಿಂಗನಿಗೆ ತನ್ನ ಅತ್ತೆಯ ಹಿರಿಯ ಮಗಳೊಂದಿಗೆ ವಿವಾಹವಾಗುತ್ತದೆ. ವಿವಾಹದ ನಂತರ ಆತ ತನ್ನ ಪತ್ನಿ, ಅತ್ತೆ ಹಾಗೂ ನಾದಿನಿಯೊಂದಿಗೆ ಚಿಕ್ಕನಾಯಕನಹಳ್ಳಿಯ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಮಾರ್ಗಮಧ್ಯೆ ಒಂದು ಬೆಟ್ಟ ಮತ್ತು ಅದರ ಪಕ್ಕದಲ್ಲಿರುವ ಕಣಿವೆಯನ್ನು ದಾಟುವ ಸಂದರ್ಭ ಬರುತ್ತದೆ.
ಪ್ರಯಾಣದ ವೇಳೆ ಅತ್ತೆ ಮತ್ತು ನಾದಿನಿ ಮದಲಿಂಗನೊಂದಿಗೆ ಹಾಸ್ಯವಾಗಿ ಮಾತನಾಡುತ್ತಿರುತ್ತಾರೆ. ಆಗ ನಾದಿನಿ, “ಅಕ್ಕನನ್ನು ಬಿಟ್ಟು ಇರಲು ನನಗೆ ತುಂಬಾ ಕಷ್ಟವಾಗುತ್ತದೆ” ಎಂದು ಹೇಳುತ್ತಾಳೆ. ಅದಕ್ಕೆ ಅತ್ತೆ, “ನಿನಗೂ ಮದುವೆಯಾದ ಮೇಲೆ ಗಂಡನ ಮನೆಗೆ ಹೋಗಲೇಬೇಕು” ಎಂದು ಹೇಳುತ್ತಾಳೆ. ಆಗ ನಾದಿನಿ, “ನನಗೆ ಮದುವೆಯೇ ಬೇಡ” ಎಂದು ಉತ್ತರಿಸುತ್ತಾಳೆ.
ಇದಕ್ಕೆ ಮದಲಿಂಗ ವ್ಯಂಗ್ಯವಾಗಿ, “ಮೊದಲಿಗೆ ಎಲ್ಲರೂ ಹೀಗೆಯೇ ಹೇಳುತ್ತಾರೆ; ಆದರೆ ಸಮಯ ಬಂದಾಗ ಹೋಗಲೇಬೇಕು” ಎಂದು ಹೇಳುತ್ತಾನೆ. ಆಗ ನಾದಿನಿ, “ಮದುವೆಯಾಗಿ ಮೂರು ದಿನವೂ ಆಗಿಲ್ಲ, ಈಗಲೇ ಎಲ್ಲ ತಿಳಿದವನಂತೆ ಮಾತನಾಡುತ್ತಿದ್ದೀಯ” ಎಂದು ಪ್ರತಿಕ್ರಿಯಿಸುತ್ತಾಳೆ. ನಾದಿನಿಯನ್ನು ಮತ್ತಷ್ಟು ರೇಗಿಸಲು ಮದಲಿಂಗ, “ನಿನಗೆ ಅಕ್ಕನನ್ನು ಬಿಟ್ಟು ಇರಲು ಆಗದಿದ್ದರೆ, ನಿನ್ನನ್ನೂ ನಮ್ಮ ಜೊತೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳುತ್ತಾನೆ. ಇದರಿಂದ ಅತ್ತೆ ಒಂದು ಪಂಥ (ಸವಾಲು) ಹಾಕುತ್ತಾಳೆ.
ಅತ್ತೆ, “ಈ ಬೆಟ್ಟವನ್ನು ಹಿಂದಕ್ಕೆ ಮುಖ ಮಾಡಿಕೊಂಡೇ ಹತ್ತಿ, ಅದೇ ರೀತಿಯಲ್ಲಿ ಇಳಿದು ಬಂದರೆ ನನ್ನ ಕಿರಿಯ ಮಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳುತ್ತಾಳೆ. ಅದಕ್ಕೆ ಮದಲಿಂಗ ಪಂಥವನ್ನು ಒಪ್ಪಿಕೊಂಡು, “ಆಗ ನೀವು ಆ ಕಣಿವೆಯಿಂದ ನೀರು ತಂದು, ಅವಳ ಕೈಯಿಂದ ನನಗೆ ಕುಡಿಯಲು ಕೊಡಬೇಕು” ಎಂದು ಹೇಳುತ್ತಾನೆ.
ಮದಲಿಂಗ ಹಿಂದಕ್ಕೆ ಮುಖ ಮಾಡಿಕೊಂಡೇ ಬೆಟ್ಟವನ್ನು ಯಶಸ್ವಿಯಾಗಿ ಹತ್ತಿ, ಅದೇ ರೀತಿಯಲ್ಲಿ ಕೆಳಗೆ ಇಳಿದು ಬರುತ್ತಾನೆ. ಆದರೆ ನಾದಿನಿ ನೀರು ನೀಡುವ ವೇಳೆ ಆಕೆಯ ಕೈಯಿಂದ ಪಾತ್ರೆ ಜಾರಿ ಬಿದ್ದು, ನೀರು ಸಂಪೂರ್ಣವಾಗಿ ಚೆಲ್ಲಿಹೋಗುತ್ತದೆ. ಬಹಳ ದಾಹದಿಂದ ಬಳಲುತ್ತಿದ್ದ ಮದಲಿಂಗನಿಗೆ ಕುಡಿಯಲು ನೀರು ಸಿಗದೆ, ಕೊನೆಗೆ ಅಲ್ಲಿಯೇ ಪ್ರಾಣ ತ್ಯಜಿಸುತ್ತಾನೆ. ಈ ಘಟನೆ ನಡೆದ ಸ್ಥಳವೇ ನಂತರ “ಮದಲಿಂಗನ ಕಣಿವೆ” ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು ಎಂದು ಸ್ಥಳೀಯರು ನಂಬುತ್ತಾರೆ.
ಈ ಘಟನೆಯ ನಂತರ ಮದಲಿಂಗನಿಗೆ ನೀರು ತರಲು ತೆರಳಿದ ಅವನ ಪತ್ನಿ ಒಂದು ಮಡುವಿನಲ್ಲಿ ಬಿದ್ದು ಮೃತಪಟ್ಟಳು. ಆ ಸ್ಥಳವನ್ನು “ಮದನಮಡು” ಎಂದು ಕರೆಯುತ್ತಾರೆ. ಮದಲಿಂಗನನ್ನು ರಕ್ಷಿಸಲು ಪ್ರಯತ್ನಿಸಿದ ನಾದಿನಿ (ಜಾಣೆ) ಕೂಡ ಅಲ್ಲಿ ಮೃತಪಟ್ಟಳು. ಆ ಸ್ಥಳವು “ಜಾಣೆಹಾರ್” ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು. ಅಳಿಯ ಹಾಗೂ ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ದುಃಖಗೊಂಡ ಅತ್ತೆ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಮೃತಪಟ್ಟಳು. ಆ ಸ್ಥಳವನ್ನು “ಹತ್ಯಾಳು” ಎಂದು ಕರೆಯಲಾಗುತ್ತದೆ. ಅತ್ತೆಯನ್ನು ಸಮಾಧಿ ಮಾಡಿದ ಸ್ಥಳವನ್ನು ಇಂದಿಗೂ “ಅಜ್ಜಿಗುಡ್ಡೆ” ಎಂದು ಕರೆಯಲಾಗುತ್ತದೆ ಎಂದು ಸ್ಥಳೀಯ ಜನಪದ ನಂಬಿಕೆ ಹೇಳುತ್ತದೆ.
ಭೇಟಿ ನೀಡಿ




