ಸಂಗಮ

ಸಂಗಮವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸೇರುವ ಸ್ಥಳವಾಗಿದೆ. ಸಂಗಮವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಈ ಸ್ಥಳದಲ್ಲಿ ಪ್ರವಾಸಿಗರಿಗಾಗಿ ಜಲಕ್ರೀಡೆ ಮತ್ತು ತೆಪ್ಪಗಳ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಸ್ಥಳವು ಬೆಂಗಳೂರಿನಿಂದ 92 ಕಿ.ಮೀ, ರಾಮನಗರದಿಂದ 63 ಕಿ.ಮೀ ಹಾಗೂ ಕನಕಪುರದಿಂದ ಕೇವಲ 33 ಕಿ.ಮೀ ದೂರದಲ್ಲಿದೆ.

ಅರ್ಕಾವತಿ ನದಿಯು ಕನಕಪುರದ ಮಾರ್ಗವಾಗಿ ಸುಮಾರು 32 ಕಿ.ಮೀ ಹರಿದು, ಬಳಿಕ ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯ ಪ್ರದೇಶವನ್ನು ಹಾದು, ಕಾವೇರಿ ನದಿಯನ್ನು ಸಂಗಮ ಎನ್ನುವ ಸ್ಥಳದಲ್ಲಿ ಸೇರುತ್ತದೆ. ಎರಡು ನದಿಗಳ ಸಂಗಮದ ನಂತರ, ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿ.ಮೀ ದೂರದಲ್ಲಿ ಮೇಕೆದಾಟು ಸಿಕ್ಕುತ್ತದೆ. ಈ ಸ್ಥಳವು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಮೇಕೆದಾಟು ಎಂದು ಪ್ರಸಿದ್ಧವಾಗಿದ್ದರೂ ಸಹ, ಆಕರ್ಷಣೆಯ ಪೂರ್ವಸಿದ್ಧತೆ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ಮಧ್ಯೆ ಮುಂದೆ ಹರಿದಂತೆ ಅದರ ಪಾತ್ರ ಕ್ರಮೇಣ ಕಿರಿದಾಗುತ್ತ ಹೋಗುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚಾಗುವುದರಿಂದ ನೀರಿನ ಪ್ರವಾಹ ಭೀಕರವಾಗಿ ಹರಿದು, ಈ ಪ್ರದೇಶವೆಲ್ಲ ಗಂಭೀರ ಸ್ವರದಿಂದ ಮೊಳಗುತ್ತದೆ. ಶತಮಾನಗಳ ಪ್ರವಾಹದ ಹೊಡೆತದಿಂದ ಬೆಟ್ಟಗಳ ಇಕ್ಕೆಲಗಳ ಬಂಡೆಗಳು ಚಿತ್ರವಿಚಿತ್ರವಾಗಿ ಕೊರೆದು ಹೋಗಿ, ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ.

ಭೇಟಿ ನೀಡಿ
ಕನಕಪುರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section