ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲೂಕು ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಈ ಸ್ಥಳವು ಬೆಂಗಳೂರಿಂದ 98 ಕಿ.ಮೀ ಮತ್ತು ರಾಮನಗರದಿಂದ 66 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರದಿಂದ ಕೇವಲ 38 ಕಿ.ಮೀ ದೂರದಲ್ಲಿದೆ.
ಅರ್ಕಾವತಿ ನದಿಯು ಕನಕಪುರದ ಮಾರ್ಗವಾಗಿ ಸುಮಾರು 32 ಕಿ.ಮೀ ಹರಿದು ಕಡೆಗೆ ತಾಲ್ಲೂಕಿನ ದಕ್ಷಿಣದ ಪ್ರದೇಶವಾದ ಅರಣ್ಯವನ್ನು ಹೊಕ್ಕು ಕಾವೇರಿಯನ್ನು ಸಂಗಮ ಎನ್ನುವೆಡೆ ಸೇರುತ್ತದೆ. ಎರಡು ನದಿಗಳ ಸಂಗಮದ ನಂತರ ಮುಂದೆ, ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿ.ಮೀ ದೂರದಲ್ಲಿ ಮೇಕೆದಾಟು ಸಿಕ್ಕುತ್ತದೆ. ಈ ಸ್ಥಳವು ಪ್ರವಾಸಿಗರಿಗೆ ಮುಖ್ಯ ಆಕರ್ಷಣೀಯ ಕೇಂದ್ರವಾಗಿದೆ. ಮೇಕೆದಾಟು ಎಂದು ಪ್ರಸಿದ್ಧವಾಗಿದ್ದರೂ ಸಹ, ಆಕರ್ಷಣೀಯ ಪೂರ್ವ ಸಿದ್ಧತೆ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಮುಂದೆ ಪ್ರವಹಿಸಿದಂತೆ ಅದರ ಪಾತ್ರ ಕ್ರಮಕ್ರಮವಾಗಿ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುತ್ತ ಹೋಗುವುದರಿಂದ ನೀರಿನ ಪ್ರವಾಹ ಭೀರ್ಗರೆಯುತ್ತ ಈ ಪ್ರದೇಶವೆಲ್ಲ ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಇಕ್ಕೆಲಗಳ ಬೆಟ್ಟಗಳ ಬಂಡೆಗಳು, ಚಿತ್ರ ವಿಚಿತ್ರವಾಗಿ ಕೊರೆದು ಹೋಗಿ ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ.
ಭೇಟಿ ನೀಡಿ









