ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ, ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಮೇಕೆದಾಟು ದೂರಗಳು
- ಬೆಂಗಳೂರು – 98 ಕಿ.ಮೀ
- ರಾಮನಗರ – 66 ಕಿ.ಮೀ
- ಕನಕಪುರ – 38 ಕಿ.ಮೀ
ಅರ್ಕಾವತಿ ನದಿಯು ಕನಕಪುರದ ಮಾರ್ಗವಾಗಿ ಸುಮಾರು 32 ಕಿ.ಮೀ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯವನ್ನು ಹೊಕ್ಕು, ಕಾವೇರಿಯನ್ನು ಸಂಗಮವೆಂದು ಕರೆಯುವೆಡೆ ಸೇರುತ್ತದೆ. ಎರಡು ನದಿಗಳ ಸಂಗಮದ ನಂತರ, ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿ.ಮೀ ದೂರದಲ್ಲಿ ಮೇಕೆದಾಟು ಕಾಣಿಸುತ್ತದೆ. ಈ ಸ್ಥಳವು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಮೇಕೆದಾಟು ಎಂದೆ ಪ್ರಸಿದ್ಧವಾದರೂ, ಆಕರ್ಷಣೀಯ ದೃಶ್ಯಾವಳಿ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಪ್ರವಹಿಸುತ್ತ, ಅದರ ಪಾತ್ರ ಕ್ರಮೇಣ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುವುದರಿಂದ ನೀರಿನ ಪ್ರವಾಹ ಭೀಕರವಾಗುತ್ತ, ಈ ಪ್ರದೇಶವು ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹ ಹೊಡೆತದಿಂದ ರೂಪಿತವಾದ ಇಕ್ಕೆಲ ಬಂಡೆಗಳು ಚಿತ್ರವಿಚಿತ್ರವಾಗಿ ಕೊರೆದು ಹೋಗಿ, ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಂತೆ ಕಂಗೊಳಿಸುತ್ತವೆ.
ಭೇಟಿ ನೀಡಿ









