ಮೇಕೆದಾಟುವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ, ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿಯ ಪಾತ್ರದಲ್ಲಿರುವ ಒಂದು ಪ್ರಸಿದ್ಧ ಪ್ರೇಕ್ಷಣೀಯ ತಾಣವಾಗಿದೆ.
ಮೇಕೆದಾಟಿನ ದೂರಗಳು
- ಬೆಂಗಳೂರು – 98 ಕಿ.ಮೀ
- ರಾಮನಗರ – 66 ಕಿ.ಮೀ
- ಕನಕಪುರ – 38 ಕಿ.ಮೀ
ಅರ್ಕಾವತಿ ನದಿಯು ಕನಕಪುರ ಮಾರ್ಗವಾಗಿ ಸುಮಾರು 32 ಕಿಲೋಮೀಟರ್ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯ ಪ್ರದೇಶವನ್ನು ದಾಟಿ, ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ಎರಡು ನದಿಗಳ ಸಂಗಮದ ನಂತರ, ಕಾವೇರಿ ನದಿಯ ಎಡ ದಂಡೆಯಲ್ಲಿ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮೇಕೆದಾಟು ಇದೆ.
ಈ ಸ್ಥಳವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ‘ಮೇಕೆದಾಟು’ ಎಂದೇ ಪ್ರಸಿದ್ಧವಾಗಿದ್ದರೂ, ಇದರ ಅದ್ಭುತ ನೈಸರ್ಗಿಕ ಸೌಂದರ್ಯವು ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿ ಮತ್ತು ಕಾವೇರಿ ನದಿಗಳು ದಟ್ಟವಾದ ಅರಣ್ಯದ ಮಧ್ಯೆ ಹರಿಯುತ್ತಾ, ನದಿಯ ಪಾತ್ರವು ಕ್ರಮೇಣ ಕಿರಿದಾಗುತ್ತ ಸಾಗುತ್ತದೆ.
ಮುಂದೆ ಇಳಿಜಾರು ಹೆಚ್ಚಾಗುತ್ತಿದ್ದಂತೆ ನೀರಿನ ಹರಿವು ಪ್ರಬಲವಾಗಿ, ಇಡೀ ಪ್ರದೇಶವು ಗಂಭೀರ ನಾದದಿಂದ ಮೊಳಗುತ್ತದೆ. ಶತಮಾನಗಳ ಕಾಲ ನಿರಂತರವಾಗಿ ಹರಿದ ನೀರಿನ ಪ್ರವಾಹದಿಂದ ನದಿಯ ಇಕ್ಕೆಲಗಳ ಬಂಡೆಗಳು ವಿಚಿತ್ರ ಆಕಾರಗಳಲ್ಲಿ ಕೊರೆದು, ನಿಸರ್ಗವೇ ನಿರ್ಮಿಸಿದ ಅದ್ಭುತ ಶಿಲ್ಪಕಲಾಕೃತಿಗಳಂತೆ ಕಂಗೊಳಿಸುತ್ತವೆ.
ಭೇಟಿ ನೀಡಿ









