ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಂದಿರವು ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆದೇವರಪುರ ಗ್ರಾಮದಲ್ಲಿ ಇದೆ. ಈ ಗ್ರಾಮವು ಐತಿಹಾಸಿಕ, ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದು, ಇದರ ಹಿಂದಿನ ಹೆಸರು ‘ಹೊರಕೇರಿದೇವರಪುರ’ ಎಂದು ತಿಳಿಯಲಾಗಿದೆ.
ಹೊರಕೆರೆದೇವರಪುರ ಪುರಾತನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 200 ಕಿ.ಮೀ
- ಚಿತ್ರದುರ್ಗ – 30 ಕಿ.ಮೀ
- ಹೊಳಲ್ಕೆರೆ – 22 ಕಿ.ಮೀ
- ಹೊಳಲ್ಕೆರೆ ರೈಲ್ವೆ ನಿಲ್ದಾಣ – 28 ಕಿ.ಮೀ
ಈ ದೇವಾಲಯವು ಹೊರಕೆರೆದೇವರಪುರ ಗ್ರಾಮದ ಮಧ್ಯಭಾಗದಲ್ಲಿ ಇದ್ದು, ಪೂರ್ವಾಭಿಮುಖವಾಗಿದೆ. ಕ್ರಿ.ಶ. 17–18ನೇ ಶತಮಾನದ ಪಾಳೆಯಗಾರರ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ‘ಹೊರಕೆರೆ ರಂಗನಾಥಸ್ವಾಮಿ ದೇವಾಲಯ’ ಎಂದೂ ಕರೆಯಲಾಗುತ್ತದೆ. ಶಾಸನಗಳಲ್ಲಿ ಇದನ್ನು ‘ಹೊರಕೆರೆ ರಂಗಧಾಮ’ ಎಂದು ಉಲ್ಲೇಖಿಸಲಾಗಿದೆ.
ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ, ಸಭಾಮಂಟಪ, ಮಹಾಮಂಟಪ, ಗಾಳಿಗೋಪುರ, ಧ್ವಜಸ್ತಂಭ, ಆವರಣಗೋಡೆ, ಬಲಿಪೀಠ ಹಾಗೂ ಮಹಾದ್ವಾರಗಳನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಉಯ್ಯಾಲೆಕಂಬ ಮತ್ತು ರಥಮಂಟಪಗಳಿವೆ. ಪ್ರಾಂಗಣದಲ್ಲಿ ಬಲಭಾಗದಲ್ಲಿ ಲಕ್ಷ್ಮಿ, ನಂದಿ ಮತ್ತು ಪಾದದೇವರ ಗುಡಿಗಳಿದ್ದು, ಎಡಭಾಗದಲ್ಲಿ ಭೈರವ ಮತ್ತು ಆಂಜನೇಯರ ಸಣ್ಣ ಗುಡಿಗಳಿವೆ.
ದೇವಾಲಯದ ಎಡಭಾಗದಲ್ಲಿ ತೆಪ್ಪೋತ್ಸವಕ್ಕಾಗಿ ನಿರ್ಮಿಸಲಾದ ವಿಶಾಲ ಕೊಳವಿದೆ. ಗರ್ಭಗೃಹದಲ್ಲಿ ಉದ್ಭವ ಮೂರ್ತಿಯೆಂದು ಪರಿಗಣಿಸಲ್ಪಡುವ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಎಂದು ಭಕ್ತರು ನಂಬುವ ಕಲ್ಲಿನ ಗುಂಡನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅಲ್ಲಿ ಹುತ್ತವೂ ಇದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣಕುಂಭಗಳ ಅಲಂಕಾರವಿದೆ. ಅಂತರಾಳದಲ್ಲಿ ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ನವರಂಗದಲ್ಲಿ ನಾಲ್ಕು ಚಿತ್ರಕಾಂಡ ಕಂಬಗಳಿದ್ದು, ಅದರ ಮುಂಭಾಗದಲ್ಲಿ 24 ಕಂಬಗಳ ವಿಶಾಲ ಸಭಾಮಂಟಪವಿದೆ. ಮಹಾಮಂಟಪದ ಎಡಭಾಗದಲ್ಲಿ ಆಂಜನೇಯನ ಶಿಲ್ಪವಿದೆ.
ದೀಪಸ್ತಂಭವು ಸುಮಾರು 30 ಅಡಿ ಎತ್ತರದಲ್ಲಿದೆ. ಮಹಾದ್ವಾರವನ್ನು ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕಣಶಿಲೆಯನ್ನು ಬಳಸಿ ಕಟ್ಟಲಾಗಿದೆ. ಈ ದೇವಾಲಯದ ಪ್ರಮುಖ ಉತ್ಸವವು ಫಾಲ್ಗುಣ ಮಾಸದಲ್ಲಿ ಜರುಗುತ್ತದೆ. ಪುಬ್ಬ ನಕ್ಷತ್ರದಲ್ಲಿ ಕಲ್ಯಾಣೋತ್ಸವ, ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ ತೇರು ಹಾಗೂ ಮಧ್ಯಾಹ್ನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ವೈಷ್ಣವ ಕ್ಷೇತ್ರವಾದ ಈ ಮಂದಿರದ ಗರ್ಭಗುಡಿಯನ್ನು ಕ್ರಿ.ಶ. 1348ರಲ್ಲಿ ದುಮ್ಮಿಯ ವೀರಪ್ಪ ನಾಯಕರು ನಿರ್ಮಿಸಿದರೆಂಬ ಶಾಸನ ಸಿಕ್ಕಿದೆ.
ಇತಿಹಾಸ
ಐತಿಹ್ಯದ ಪ್ರಕಾರ, ಹಿಂದೆ ಇಲ್ಲಿ ನಂದರಾಜ yಎಂಬುವನು ಆಳ್ವಿಕೆ ನಡೆಸುತ್ತಿದ್ದರು. ಆ ನಂದರಾಜನು ತಿರುಪತಿಗೆ ನಡೆದುಕೊಂಡು ಹೋಗುತ್ತಿದ್ದ ಭಕ್ತರ ಬಳಿ ಇದ್ದ ಹಣವನ್ನು ಕಸಿದುಕೊಂಡು, ಅವರಿಗೆ ಚರ್ಮದ ನಾಣ್ಯಗಳನ್ನು ನೀಡಿ ಹಿಂಸಿಸುತ್ತಿದ್ದನಂತೆ. ಇದರಿಂದ ನೊಂದ ಭಕ್ತರು ತಿಮ್ಮಪ್ಪನನ್ನು ಪ್ರಾರ್ಥಿಸಿದಾಗ, ಇಲ್ಲಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕರೇಕಲ್ಲು ಬೆಟ್ಟದ ಮೇಲೆ ಪಾದ ಊರಿ ಅವನನ್ನು ಭಸ್ಮ ಮಾಡಿದನೆಂದು ಹೇಳಲಾಗುತ್ತದೆ.
ಊರನ್ನು ದಹಿಸಲು ಮುಂದಾದ ಸಂದರ್ಭದಲ್ಲಿ, ತಾಯಿಯೊಬ್ಬಳು “ನಂದರಾಜನನ್ನು ಕೊಂದೆ, ನನ್ನ ಮಗುವನ್ನು ಕಾಪಾಡು” ಎಂದು ಬೇಡಿಕೊಂಡಾಗ, ಸ್ವಾಮಿಯು ಶಾಂತನಾಗಿ ಹುತ್ತದಲ್ಲಿ ನೆಲೆಸಿದನೆಂದು ನಂಬಲಾಗಿದೆ.
ಈ ಹುತ್ತಕ್ಕೆ ಮತಿಘಟ್ಟದ ಹಸು ಪ್ರತಿದಿನ ಬಂದು ಕ್ಷೀರಾಭಿಷೇಕ ಮಾಡುತ್ತಿದ್ದುದನ್ನು ಕಂಡ ಭಕ್ತರು, ಸ್ವಾಮಿಯ ಆದೇಶದಂತೆ ಇಲ್ಲಿ ಒಂದು ಗುಡಿಯನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಕೇರಿಯ ಹೊರಭಾಗದಲ್ಲಿ ದೇವರು ನೆಲೆನಿಂತಿದ್ದರಿಂದ ಈ ಸ್ಥಳಕ್ಕೆ ‘ಹೊರಕೇರಿದೇವರಪುರ’ ಎಂಬ ಹೆಸರು ಬಂದಿದೆ. ಕಾಲಕ್ರಮೇಣ ಜನರ ಬಳಕೆಯಲ್ಲಿ ಅದು ‘ಹೊರಕೆರೆದೇವರಪುರ’ ಎಂದು ಪ್ರಸಿದ್ಧಿಯಾಯಿತು.
ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ‘ಗುಂಡಿನ ಸೇವೆ’ ಹಾಗೂ ‘ಅನ್ನದ ಕೋಟೆ’ ಎಂಬ ವಿಶಿಷ್ಟ ಆಚರಣೆಗಳು ನಡೆಯುತ್ತವೆ. ಭಕ್ತರು ಮತ್ತು ಯಾತ್ರಿಕರಿಗಾಗಿ ಸಮುದಾಯ ಭವನ ಹಾಗೂ ಯಾತ್ರಿನಿವಾಸ ಸೌಲಭ್ಯಗಳೂ ಲಭ್ಯವಿವೆ.
ಭೇಟಿ ನೀಡಿ




