ಸೌಮ್ಯಕೇಶವ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿರುವ ಪ್ರಸಿದ್ಧ ಪುರಾತನ ವಿಷ್ಣು ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ಹಾಗೂ ವಿಜಯನಗರ ಅರಸರ ಕಾಲದಲ್ಲಿ ಹಂತ ಹಂತವಾಗಿ ನಿರ್ಮಿಸಲಾಗಿದ್ದು, ಇದು ಗೋಪುರ, ಗರ್ಭಗೃಹ, ಪ್ರದಕ್ಷಿಣಾಪಥ ಹಾಗೂ ಪಾತಾಳ ಅಂಕಣವನ್ನು ಒಳಗೊಂಡಿದೆ. ಈ ದೇವಾಲಯದ ಶಿಖರವು ಕರ್ನಾಟಕ ರಾಜ್ಯದಲ್ಲಿನ ಅತ್ಯಂತ ಎತ್ತರದ ಶಿಖರಗಳಲ್ಲೊಂದು ಎನ್ನಲಾಗಿದ್ದು, ಇದರ ಭವ್ಯ ಗೋಪುರವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ.
ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾದ ಈ ದೇವಾಲಯವು ತ್ರಿಕೂಟಾಚಲ ಶೈಲಿಯ ವಿನ್ಯಾಸವನ್ನು ಹೊಂದಿದ್ದು, ಇಲ್ಲಿ ಕ್ಷೇತ್ರದ ಪ್ರಧಾನ ದೇವರಾಗಿ ಸೌಮ್ಯಕೇಶವನು ಆರಾಧಿಸಲ್ಪಡುತ್ತಾನೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 120 ಕಿ.ಮೀ, ಮಂಡ್ಯ ನಗರದಿಂದ 43 ಕಿ.ಮೀ ಹಾಗೂ ನಾಗಮಂಗಲ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.
ಇಲ್ಲಿನ ಕೇಶವನ ವಿಗ್ರಹವು ಸೌಮ್ಯವಾದ ಮುಖವಾಡವನ್ನು ಹೊಂದಿರುವುದರಿಂದ ಇಲ್ಲಿ ನೆಲೆಸಿರುವ ಪರಮಾತ್ಮನನ್ನು ಸೌಮ್ಯಕೇಶವ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇತರ ಕೇಶವ ದೇವಾಲಯಗಳಲ್ಲಿ ಸ್ವಾಮಿಯು ಬಲಗೈಯಲ್ಲಿ ಚಕ್ರ ಮತ್ತು ಎಡಗೈಯಲ್ಲಿ ಶಂಖವನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದರೆ ಈ ದೇವಾಲಯದಲ್ಲಿ ಸ್ವಾಮಿಯು ಬಲಗೈಯಲ್ಲಿ ಶಂಖ ಹಾಗೂ ಎಡಗೈಯಲ್ಲಿ ಚಕ್ರವನ್ನು ಹಿಡಿದು, ಶ್ರೀದೇವಿ ಮತ್ತು ಭೂದೇವಿಯರ ಸಮೇತ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವುದು ವಿಶೇಷವಾದ ವೈಶಿಷ್ಟ್ಯವಾಗಿದೆ.
ಭೇಟಿ ನೀಡಿ








