ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಇರುವ ಪುರಾಣ ಪ್ರಸಿದ್ಧ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವು ಉತ್ತರ–ದಕ್ಷಿಣವಾಗಿ ಹಬ್ಬಿರುವ ಕಲ್ಲುಬಂಡೆಗಳಿಂದ ಕೂಡಿದ್ದು, ಸಮುದ್ರಮಟ್ಟದಿಂದ ಸುಮಾರು 3221 ಅಡಿ ಎತ್ತರದಲ್ಲಿದೆ.
ಇಲ್ಲಿನ ಪ್ರಧಾನ ಅಧಿದೇವತೆ ಗಂಗಾಧರೇಶ್ವರನಾಗಿದ್ದು, ಕ್ಷೇತ್ರಪಾಲಕನಾಗಿ ಕಾಲಭೈರವೇಶ್ವರನನ್ನು ಆರಾಧಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಕಾಲಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಎರಡು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಶ್ರೀ ಆದಿಚುಂಚನಗಿರಿ ಕ್ಷೇತ್ರವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಮಹಾಧರ್ಮಕ್ಷೇತ್ರವಾಗಿದ್ದು, ತಪೋಭೂಮಿಯಾಗಿ ಪ್ರಸಿದ್ಧಿ ಪಡೆದಿದೆ. ಇದರ ಇತಿಹಾಸವು ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾಗಿದೆ.
ಶ್ರೀ ಕ್ಷೇತ್ರ ಆದಿಚುಂಚನಗಿರಿಯ ದೂರಗಳು
- ಬೆಂಗಳೂರು – 110 ಕಿ.ಮೀ
- ಮಂಡ್ಯ – 67 ಕಿ.ಮೀ
- ನಾಗಮಂಗಲ – 25 ಕಿ.ಮೀ
- ಯಡಿಯೂರು ರೈಲ್ವೆ ನಿಲ್ದಾಣ – 20 ಕಿ.ಮೀ
ಹಸಿರು ಕಾನನಗಳಿಂದ ಆವರಿಸಲ್ಪಟ್ಟ ಈ ಕ್ಷೇತ್ರವು ರಮಣೀಯವೂ ಪ್ರಶಾಂತವೂ ಆಗಿದ್ದು, ಪರಶಿವನ ತಪೋಭೂಮಿಯಾಗಿತ್ತು ಎಂಬುದು ಪುರಾಣಗಳು ಹಾಗೂ ಜನಪದ ಸಾಹಿತ್ಯಗಳಿಂದ ತಿಳಿದುಬರುತ್ತದೆ. ಮಠವು ಒಂದು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಬೆಟ್ಟದ ಶಿಖರವನ್ನು “ಆಕಾಶಭೈರವ” ಎಂದು ಕರೆಯುತ್ತಾರೆ. ಇಲ್ಲಿರುವ ಪವಿತ್ರ ಹೊಂಡವನ್ನು “ಬಿಂದುಸರೋವರ” ಎಂದು ಪ್ರಸಿದ್ಧವಾಗಿದೆ.
ಪುರಾಣ ಮತ್ತು ಜನಪದ ಸಾಹಿತ್ಯ
ಸಿದ್ಧಯೋಗಿಯ ಅವತಾರವನ್ನು ತಾಳಿದ ಪರಶಿವನು ಗಜಾರಣ್ಯದ ಚುಂಚನಕಟ್ಟೆಗೆ ಬಂದು ಕಾವೇರಿ ನದೀತಟದಲ್ಲಿ ತಪೋಮಗ್ನನಾದನು. ಆ ಸಮಯದಲ್ಲಿ ತ್ರೇತಾಯುಗದಲ್ಲಿ, ತಂದೆಯ ಆಜ್ಞಾನುಸಾರವಾಗಿ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ದಂಡಕಾರಣ್ಯದ ಪಂಚವಟಿ ತೀರದಲ್ಲಿ ವಾಸಿಸುತ್ತಿದ್ದನು. ರಾವಣನು ಸೀತೆಯನ್ನು ಅಪಹರಿಸಿದ ನಂತರ, ಸೀತಾನ್ವೇಷಣೆಗೆ ಹೊರಟ ರಾಮ ಮತ್ತು ಲಕ್ಷ್ಮಣರು ಚುಂಚನಕಟ್ಟೆ ಕ್ಷೇತ್ರಕ್ಕೆ ಬಂದಾಗ, ಅಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಶಿವನನ್ನು ಕಂಡು ಭಕ್ತಿಯಿಂದ ವಂದಿಸಿದರು.
ಅದರಿಂದ ಪ್ರಸನ್ನನಾದ ಶಿವನು, “ನಿಮ್ಮ ಇಷ್ಟಾರ್ಥವು ನೆರವೇರಲಿ” ಎಂದು ಆಶೀರ್ವದಿಸಿ, ಶ್ರೀರಾಮನಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು, ಪ್ರಶಾಂತ ಹಾಗೂ ರಮಣೀಯವಾದ ಚುಂಚನಗಿರಿಗೆ ಬಂದು ತಪೋಮಗ್ನನಾದನು ಎಂದು ಒಂದು ಐತಿಹ್ಯ ಹೇಳುತ್ತದೆ.
ಇನ್ನೊಂದು ಜನಪದ ಕಥೆಯ ಪ್ರಕಾರ, ಈ ಗಿರಿಯ ದಟ್ಟ ಅರಣ್ಯದಲ್ಲಿ ಚುಂಚ ಮತ್ತು ಕಂಚ ಎಂಬ ಇಬ್ಬರು ರಾಕ್ಷಸ ಸಹೋದರರು ವಾಸವಾಗಿದ್ದರು. ಅವರು ಇಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದರು. ಅವರ ಕಿರುಕುಳವನ್ನು ಸಹಿಸಲಾರದೆ ಜನರು ಶಿವನ ಮೊರೆ ಹೋದಾಗ, ಶಿವನು ಆ ರಾಕ್ಷಸರನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಚುಂಚನು ವಾಸಮಾಡುತ್ತಿದ್ದ ಈ ಗಿರಿಗೆ “ಚುಂಚನಗಿರಿ” ಎಂಬ ಹೆಸರು ಬಂದಿತೆಂದು ಜನಪದ ಸಾಹಿತ್ಯ ತಿಳಿಸುತ್ತದೆ.
ಭೇಟಿ ನೀಡಿ






