ಕಣ್ವ ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಇರುವ ಜಲಾಶಯವಾಗಿದೆ. ಈ ಅಣೆಕಟ್ಟನ್ನು ಕಣ್ವ ನದಿಗೆ ಅಡ್ಡಲಾಗಿ 1946ರಲ್ಲಿ ಮೈಸೂರು ರಾಜಮನೆತನದವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ನಿರ್ಮಿಸಿದ್ದಾರೆ. ಇದು ಏಷ್ಯಾದಲ್ಲೇ ಸ್ವಯಂಚಾಲಿತ ಸೈಫನ್ ಗೇಟ್ಗಳನ್ನು ಹೊಂದಿರುವ ವ್ಯವಸ್ಥೆಯೊಂದಿಗೆ ನಿರ್ಮಿಸಲಾದ ಎರಡನೇ ಜಲಾಶಯವಾಗಿದೆ. ಕಣ್ವ ಜಲಾಶಯವು ಸುಮಾರು 776 ಹೆಕ್ಟೇರ್ ಪ್ರದೇಶವನ್ನು ಆವರಿಸಿದೆ.
ಕಣ್ವ ಜಲಾಶಯದ ದೂರಗಳು
- ಬೆಂಗಳೂರು – 56 ಕಿ.ಮೀ
- ರಾಮನಗರ – 12 ಕಿ.ಮೀ
- ಚನ್ನಪಟ್ಟಣ – 13 ಕಿ.ಮೀ
ಕಣ್ವ ಮಹರ್ಷಿಗಳು ರಾಮನಗರ ಮತ್ತು ಮಾಗಡಿ ಸುತ್ತಮುತ್ತಲಿನ ಗುಹೆಗಳಲ್ಲಿ ತಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ನದಿಯನ್ನು ಕಣ್ವ ನದಿಯೆಂದು ಕರೆಯಲಾಗುತ್ತದೆ. ಕಣ್ವ ನದಿ ಕಾವೇರಿ ನದಿಯ ಉಪನದಿಯಾಗಿದೆ.
ಈ ಜಲಾಶಯದ ಮುಖ್ಯ ಉದ್ದೇಶ ನೀರಾವರಿಯಾಗಿದೆ. ಕಣ್ವ ಜಲಾಶಯದ ಇನ್ನೊಂದು ಬದಿಯಲ್ಲಿ ಮೀನುಗಾರಿಕೆ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ಕಾಣಬಹುದು. ಮೀನು ಸಾಕಾಣಿಕೆಯ ಮೂಲಕ ಗ್ರಾಮಸ್ಥರು ಸ್ವಾವಲಂಬರಾಗುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಪಕ್ಷಿಸಂಕುಲದಿಂದಾಗಿ ಇದು ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ಚನ್ನಪಟ್ಟಣದ ಹತ್ತಿರದ ಕೃಷಿ ಭೂಮಿಗಳಿಗೆ ಇದು ಪ್ರಮುಖ ನೀರಿನ ಸಂಪನ್ಮೂಲವಾಗಿದೆ.
ಭೇಟಿ ನೀಡಿ







