ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಇರುವ, 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ದೇವಾಲಯವಾಗಿದೆ. ಈ ದೇವಾಲಯವು ಬೆಂಗಳೂರು–ಮೈಸೂರು ಹೆದ್ದಾರಿ ಮುಖ್ಯ ರಸ್ತೆಯ ಪಕ್ಕದಲ್ಲಿದೆ.
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ದೂರಗಳು
- ಬೆಂಗಳೂರು – 52 ಕಿ.ಮೀ
- ರಾಮನಗರ – 5 ಕಿ.ಮೀ
- ಚನ್ನಪಟ್ಟಣ – 5 ಕಿ.ಮೀ
- ರಾಮನಗರ ರೈಲ್ವೆ ನಿಲ್ದಾಣ – 4 ಕಿ.ಮೀ
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಸುತ್ತಮುತ್ತ ಕೆಂಪು ಕಲ್ಲು ಬಂಡೆಗಳು ಹೆಚ್ಚಾಗಿ ಕಾಣಸಿಗುವುದರಿಂದ ಈ ಸ್ಥಳವನ್ನು ಕೆಂಗಲ್ಲು ಎಂದು ಕರೆಯುತ್ತಾರೆ. ಅದರಿಂದ ಇಲ್ಲಿರುವ ದೇವಾಲಯವು ಕೆಂಗಲ್ ಆಂಜನೇಯ ಎಂದು ಪ್ರಸಿದ್ಧವಾಗಿದೆ. 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಈ ದೇವಾಲಯದ ಮುಂಭಾಗವನ್ನು ವಿಧಾನಸೌಧ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯರು 1969ರಲ್ಲಿ ಜಿರ್ಣೋದ್ದಾರ ಮಾಡಿದ್ದಾರೆ. ಕೆಂಪುಕಲ್ಲಿನಲ್ಲಿ ಉದ್ಭವವಾದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿಯನ್ನು ಕಣ್ವರು ಮತ್ತು ವ್ಯಾಸರು ಆರಾಧಿಸಿದ್ದಾರೆ.
ಶ್ರೀ ಆಂಜನೇಯ ಸ್ವಾಮಿಯ ಮೂರ್ತಿಯು ಕರದಲ್ಲಿ ಶಂಖ, ಚಕ್ರ, ಸೌಗಂಧಿಕಾ ಪುಷ್ಪ ಮತ್ತು ಬಾಲದಲ್ಲಿ ಗಂಟೆಯೊಂದಿಗೆ ವಿರಾಜಮಾನವಾಗಿದ್ದಾನೆ. ಸಂಕ್ರಾಂತಿಯ ಪುಣ್ಯಕಾಲದ ಮೊದಲ ದಿನದ ಸೂರ್ಯನ ಕಿರಣಗಳು ಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತವೆ. ಈ ದೇವಾಲಯದಲ್ಲಿ ಶ್ರೀ ರಾಮ, ಲಕ್ಷಣ, ಸೀತಾಮಾತೆ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀನರಸಿಂಹಸ್ವಾಮಿಗಳ ವಿಗ್ರಹಗಳಿವೆ. ಪ್ರತಿ ವರ್ಷ ಸಂಕ್ರಾಂತಿಯ ಸಂದರ್ಭದಲ್ಲಿ 12 ದಿನಗಳ ಬ್ರಹ್ಮರಥೋತ್ಸವ ಮತ್ತು ಭಾರಿ ಪ್ರಮಾಣದ ದನಗಳ ಜಾತ್ರೆ ನಡೆಯುತ್ತದೆ.
ಭೇಟಿ ನೀಡಿ





