ಗುರುನಾನಕ್ ಝೀರಾ ಸಾಹಿಬ್ ಮಂದಿರವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿರುವ ಸಿಖ್ ಸಮುದಾಯದ ಪವಿತ್ರ ತೀರ್ಥಕ್ಷೇತ್ರವಾಗಿದೆ. 1948ರಲ್ಲಿ ನಿರ್ಮಿಸಲಾದ ಈ ಮಂದಿರವು ಮೊದಲ ಸಿಖ್ ಗುರು ಶ್ರೀ ಗುರುನಾನಕ್ ಅವರಿಗೆ ಸಮರ್ಪಿತವಾಗಿದೆ.
ಈ ಮಂದಿರವು ಬೆಂಗಳೂರಿನಿಂದ 684 ಕಿ.ಮೀ (NH-44, ಹೈದರಾಬಾದ್ ಮಾರ್ಗವಾಗಿ), ಬೀದರ್ನಿಂದ 4 ಕಿ.ಮೀ, ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ.
ಇತಿಹಾಸ
ಬೀದರ್ ಸಿಖ್ ಧರ್ಮದೊಂದಿಗೆ ಬಹಳ ಹಳೆಯ ಸಂಬಂಧ ಹೊಂದಿದೆ. ಇದಕ್ಕೆ ಕಾರಣ, ಸಿಖ್ ಗುರುಗಳ ಐದು ಪ್ರೀತಿಪಾತ್ರರಲ್ಲಿ ಒಬ್ಬರಾದ ಭಾಯಿ ಸಾಹಿಬ್ ಸಿಂಗ್ ಬೀದರ್ನ ಸ್ಥಳೀಯರಾಗಿದ್ದು, ತಮ್ಮ ತವರಿನಲ್ಲಿ ನೆಲೆಸಿದ್ದರು. ಅವರು ಕೆಲವು ಸಮಯ ಕ್ಷೌರಿಕರಾಗಿದ್ದರು ಮತ್ತು ಬೀದರ್ನ ಗುರುನಾರಾಯಣ ಮತ್ತು ಅಂಕಮ್ಮ ದಂಪತಿಗಳ ಪುತ್ರರಾಗಿದ್ದರು. ಭಾಯಿ ಸಾಹಿಬ್ ಸಿಂಗ್ ದೀಕ್ಷಾಸ್ನಾನ ಪಡೆದ ಮೊದಲ ಸದಸ್ಯರಾಗಿದ್ದರು.
ಕ್ರಿ.ಶ. 1510 ಮತ್ತು 1514 ರ ನಡುವೆ, ಗುರು ನಾನಕ್ ದಕ್ಷಿಣ ಭಾರತದ ಮಿಷನರಿ ಪ್ರವಾಸದ ಭಾಗವಾಗಿ ನಾಗಪುರಕ್ಕೆ ಭೇಟಿ ನೀಡಿ, ನಂತರ ನರ್ಮದಾ ನದಿಯ ತೀರದ ಪ್ರಾಚೀನ ಓಂಕಾರೇಶ್ವರ ದೇವಾಲಯಕ್ಕೆ ಹೋಗಿದರು. ಬಳಿಕ ಅವರು ನಾಂದೆಡ್ ತಲುಪಿದರು. ನಾಂದೆಡ್ನಿಂದ ಹೈದರಾಬಾದ್ ಮತ್ತು ಗೋಲ್ಕೊಂಡ ಕಡೆಗೆ ಪ್ರಯಾಣವನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ಅವರು ಮುಸ್ಲಿಂ ಸಂತರನ್ನು ಭೇಟಿಯಾಗಿದ್ದು, ನಂತರ ಪೀರ್ ಜಲಾಲುದ್ದೀನ್ ಮತ್ತು ಯಾಕೂಬ್ ಅಲಿಯನ್ನು ಭೇಟಿಯಾಗಲು ಬೀದರ್ಗೆ ಬಂದರು.
ಗುರುಗಳು ತಮ್ಮ ಸಹಚರ ಮರ್ದಾನ ಅವರೊಂದಿಗೆ ಬೀದರ್ನ ಹೊರವಲಯದಲ್ಲಿ ಬಹುಕಾಲ ತಂಗಿದ್ದರು. ಹತ್ತಿರದಲ್ಲಿ ಮುಸ್ಲಿಂ ಫಕೀರರ ಗುಡಿಸಲುಗಳು ಇದ್ದವು. ಮುಸ್ಲಿಂರು ಮಹಾನ್ ಗುರುಗಳ ಧರ್ಮೋಪದೇಶ ಮತ್ತು ಬೋಧನೆಗಳಲ್ಲಿ ತೀವ್ರ ಆಸಕ್ತಿ ತೋರಿದರು. ಉತ್ತರದ ಪವಿತ್ರ ಸಂತರ ಬಗ್ಗೆ ಸುದ್ದಿ ಬೇಗನೆ ಬೀದರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿತು. ಹೆಚ್ಚಿನ ಸಂಖ್ಯೆಯ ಜನರು ಗುರುಗಳ ದರ್ಶನಕ್ಕೆ ಬರುವುದರೊಂದಿಗೆ ಅವರ ಆಶೀರ್ವಾದ ಪಡೆಯಲು ಸೇರುವುದನ್ನು ಪ್ರಾರಂಭಿಸಿದರು.
ಅದೇ ಸಮಯದಲ್ಲಿ ಬೀದರ್ನಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಇತ್ತು. ಜನರು ಬಾವಿಗಳನ್ನು ಅಗೆದು ನೀರನ್ನು ಹೊರತೆಗೆದರೂ, ಕುಡಿಯಲು ಯೋಗ್ಯ ನೀರು ದೊರಕುತ್ತಿರಲಿಲ್ಲ. ಜನರ ಸಂಕಷ್ಟವನ್ನು ನೋಡಿ, ಗುರುಗಳು ತುಂಬಾ ನೊಂದು, “ಸತ್ ಕರ್ತಾರ್” ಎಂದು ಉಚ್ಚರಿಸುತ್ತಾ, ಒಂದು ಕಲ್ಲನ್ನು ಸ್ಥಳಾಂತರಿಸಿದರು. ತಮ್ಮ ಮರದ ಚಪ್ಪಲಿಯಿಂದ ಕೆಲವು ಅವಶೇಷಗಳನ್ನು ತೆಗೆದು ಆ ಸ್ಥಳದಲ್ಲಿ ಹಾಕಿದಾಗ, ಎಲ್ಲರ ಆಶ್ಚರ್ಯಕ್ಕೆ ಪಾತ್ರವಾಗಿ ಶುದ್ಧ, ಸಿಹಿ ನೀರು ಹೊರಬಂದಿತು.
ಈ ಹರಿಯುವ ತಂಪಾದ ನೀರನ್ನು ನಾನಕ್ ಝೀರಾ (ಝೀರಾ = ಹೊಳೆ) ಎಂದು ಕರೆಯಲಾಗುತ್ತದೆ. ಗುರುದ್ವಾರದ ಬಳಿಯ ಬಂಡೆಯಿಂದ ಇನ್ನೂ ಹರಿಯುತ್ತಿರುವ ಸ್ಫಟಿಕ ಸ್ಪಷ್ಟ ಹೊಳೆ, ಗುರುಗಳ ಪ್ರಾರ್ಥನೆಗೆ ದೇವರು ನೀಡಿದ ಉತ್ತರವೆಂದು ನಂಬಲಾಗಿದೆ. ಇದೆ ಸ್ಥಳದಲ್ಲಿ ಗುರುನಾನಕ್ ಝೀರಾ ಸಾಹಿಬ್ ಕ್ಷೇತ್ರವು ಅಂತಿಮವಾಗಿ ಸ್ಥಾಪನೆಯಾಯಿತು. 500 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಹೊಳೆಯು (ನೀರು) ಹರಿಯುತ್ತಿದ್ದು ಇಂದಿಗೂ ಬತ್ತಿಲ್ಲ.
ಗುರುನಾನಕ್ ಝೀರಾ ಸಾಹಿಬ್ ಸುಂದರ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಈ ಸ್ಥಳವು ಗುಡ್ಡಗಾಡು ಪ್ರದೇಶದ ಇಳಿಜಾರುಗಳು ಮತ್ತು ಎರಡು ಬೆಟ್ಟಗಳಿಂದ ಆವರಿತವಾಗಿದೆ. ಸುಖಾಸನ ಕೋಣೆಯಲ್ಲಿ ಸಿಖ್ಖರ ಪವಿತ್ರ ಪುಸ್ತಕವಾದ ಗುರು ಗ್ರಂಥ ಸಾಹಿಬ್ ಅನ್ನು ಇರಿಸಲಾಗಿದೆ. ಗ್ರಂಥವನ್ನು ಓದಲು ಪ್ರತ್ಯೇಕ ಕೊಠಡಿಯು ಸಹ ಇದೆ.
ದೇವಾಲಯದಲ್ಲಿ ದರ್ಬಾರ್ ಸಾಹಿಬ್, ಲಿಖಾರಿ, ದಿವಾನ್ ಹಾಲ್, ಲಂಗರ್ ಕೊಠಡಿ ಮುಂತಾದವುವು ಸೇರಿವೆ. ಯಾತ್ರಿಕರಿಗೆ 24 ಗಂಟೆಗಳ ಉಚಿತ ಆಹಾರ ನೀಡುವ ಸಮುದಾಯ ಅಡುಗೆಮನೆ (ಗುರು ಕಾ ಲಂಗರ್) ಇದೆ.
ಗುರು ತೇಜ್ ಬಹದ್ದೂರ್ ಅವರ ಸ್ಮರಣಾರ್ಥವಾಗಿ ಸಿಖ್ ಇತಿಹಾಸದ ಪ್ರಮುಖ ಘಟನೆಗಳ ಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಪ್ರದರ್ಶಿಸುವ ಸಿಖ್ ವಸ್ತುಸಂಗ್ರಹಾಲಯ ಸಹ ನಿರ್ಮಿಸಲಾಗಿದೆ. ಇಲ್ಲಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ರಶೀದಿಗಳನ್ನು ನೀಡಲಾಗುತ್ತದೆ.
ಗುರುದ್ವಾರದ ಮುಂಭಾಗದ ಮೆಟ್ಟಿಲುಗಳ ಎದುರು ಸಣ್ಣ ಅಮೃತ್ ಕುಂಡ್ (ಪವಿತ್ರ ನೀರಿನ ಟ್ಯಾಂಕ್) ನಿರ್ಮಿಸಲಾಗಿದೆ. ಈ ಕುಂಡದಲ್ಲಿ ಸ್ನಾನವು ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವುದಾಗಿ ನಂಬಲಾಗಿದೆ.
ಗುರುದ್ವಾರದಲ್ಲಿ ಇರುವ ನೀರಿನ ಬುಗ್ಗೆ ವಿಶೇಷವಾಗಿ ಸಂರಕ್ಷಿಸಲಾಗಿದೆ. ಈ ಬುಗ್ಗೆ ಮತ್ತು ಅದರ ನೀರನ್ನು ಶುದ್ಧವಾಗಿ ಕಾಯಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ಗುರುದ್ವಾರವು ಬುಗ್ಗೆ ಮತ್ತು ಸುರಂಗದ ಹೊರಹೊಮ್ಮುವ ನೀರಿನ ಸ್ಥಳವನ್ನು ಅಲಂಕಾರಿಕವಾಗಿ ಅಲಂಕರಿಸಿದೆ. ಗಾಜಿನ ಫಲಕದಿಂದ ಈ ಬುಗ್ಗೆಯನ್ನು ವೀಕ್ಷಿಸಲು ಅವಕಾಶವಿದೆ, ಆದರೆ ಅದನ್ನು ಅಪವಿತ್ರಗೊಳಿಸದಂತೆ ನೋಡಿಕೊಳ್ಳಲಾಗುತ್ತಿದೆ. ಯಾತ್ರಿಕರು ಬುಗ್ಗೆ ಹರಿಯುವ ಪವಿತ್ರ ನೀರನ್ನು ಬಾಟಲಿ ಅಥವಾ ನೀರಿನ ಕ್ಯಾನ್ಗಳಲ್ಲಿ ಒಯ್ಯುತ್ತಾರೆ.
ಸಿಖ್ಖರ ಪ್ರಮುಖ ಹಬ್ಬಗಳಲ್ಲಿ ಒಂದಾದ ಗುರುನಾನಕ್ ಜಯಂತಿ ಸಂದರ್ಭದಲ್ಲಿ ಈ ಗುರುದ್ವಾರಕ್ಕೆ ಭಕ್ತರು ವಿಶೇಷವಾಗಿ ಸೇರುತ್ತಾರೆ. ಈ ಸಮಯದಲ್ಲಿ ದೇವಾಲಯವನ್ನು ಧ್ವಜಗಳು, ಬ್ಯಾನರ್ಗಳು ಮತ್ತು ದೀಪಗಳಿಂದ ಸೌಂದರ್ಯಮಯವಾಗಿ ಅಲಂಕರಿಸಲಾಗುತ್ತದೆ. ಪ್ರತಿ ವರ್ಷ ಸುಮಾರು ನಾಲ್ಕು–ಐದು ಲಕ್ಷ ಯಾತ್ರಿಕರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಭೇಟಿ ನೀಡಿ








