ಶ್ರೀ ಪಾಪನಾಶ ಮಹಾದೇವ ಸ್ವಾಮಿ ದೇವಾಲಯ

ಶ್ರೀ ಪಾಪನಾಶ ಮಹಾದೇವ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿ ಶಿವನಗರ ಬಡಾವಣೆಯಲ್ಲಿ ಇರುವ ಹಿಂದೂ ದೇವರು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ 757 ಕಿ.ಮೀ (NH50 ಕರ್ನಾಟಕದ ಮೂಲಕ), 683 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 5 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ ಇದೆ.

ದೇವಾಲಯದ ಇತಿಹಾಸ

ಈ ಶಿವ ದೇವಾಲಯದ ಗರ್ಭ ಗುಡಿಯಲ್ಲಿ ಒಂದು ಬೃಹತ್ ಶಿವಲಿಂಗವಿದೆ. ಆ ದೇವಾಲಯದ ಇತಿಹಾಸವು ನಮ್ಮನ್ನು ತ್ರೇತ್ರಾಯುಗಕ್ಕೆ ಕರೆದೊಯ್ಯುತ್ತದೆ. ರಾವಣನ ಸಂಹಾರ ಮಾಡಿದ ನಂತರ, ಪ್ರಭು ಶ್ರೀರಾಮಚಂದ್ರನು ಬ್ರಹ್ಮಹತ್ಯೆ ದೋಷ ನಿವಾರಣೆಗಾಗಿ ಅಯೋಧ್ಯೆಗೆ ತೆರಳುವ ಮಾರ್ಗದ ಉದ್ದಕ್ಕೂ ಆನೇಕ ಶಿವಲಿಂಗಗಳನ್ನು ನಿರ್ಮಿಸಿದನು. ಶ್ರೀರಾಮಚಂದ್ರನು ನಿರ್ಮಿಸಿದ ಈ ಶಿವಲಿಂಗಗಳಲ್ಲಿ ಪಾಪನಾಶ ಶಿವಲಿಂಗವು ಮಹತ್ವವಾಗಿದೆ.

ಶ್ರೀರಾಮಚಂದ್ರನು ಶಿವಭಕ್ತ ಹಾಗೂ ಬ್ರಹ್ಮಣನಾದ ರಾವಣನ ಸಂಹರಿಸಿದ ಪಾಪವನ್ನು ಪರಿಹರಿಸಿಕೊಳ್ಳಲು ಇಲ್ಲಿ ಶಿವಲಿಂಗವನ್ನು ನಿರ್ಮಾಣ ಮಾಡಿದರು. ಆ ಶಿವಲಿಂಗವೇ ಪಾಪನಾಶ ಶಿವ ದೇವಾಲಯ. ಶಿವ ದೇವರಿಗೆ ಅಭಿಷೇಕ ಮಾಡಲು ನೀರಿಲ್ಲದ ಕಾರಣ ಶ್ರೀರಾಮಚಂದ್ರನು ಸ್ವತಃ ಬಾಣ ಬಿಟ್ಟು ಕೊಳವನ್ನು(ತೀರ್ಥ) ನಿರ್ಮಿಸಿದನ್ನು. ಈ ಅದ್ಭುತ ತೀರ್ಥವೇ ಪಾಪನಾಶ ತೀರ್ಥ. ಪಾಪನಾಶ ಶಿವ ದೇವಾಲಯಕ್ಕೆ ಬರುವ ಭಕ್ತಾದಿಗಳು ಈ ಕೊಳದಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಬರುತ್ತಾರೆ. ಈ ಪಾಪನಾಶ ಕೊಳದ ವಿಶೇಷವೇನೆಂದರೆ ಕೊಳವು ಬೇಸಿಗೆ ಕಾಲದಲ್ಲಿ ಸಹ ಬತ್ತೋದಿಲ್ಲ.

ಪಾಪನಾಶ ದೇವಾಲಯದ ಗರ್ಭ ಗುಡಿಯಲ್ಲಿ ರಾಮಚಂದ್ರರು ಪ್ರತಿಷ್ಠಾಪಿಸಿದ ದೊಡ್ಡ ಶಿವಲಿಂಗವಿದ್ದು, ಗರ್ಭಗುಡಿ ಹೊರಗೆ ಮೂರು ಸಣ್ಣ ಸಣ್ಣ ಶಿವಲಿಂಗಗಳಿವೆ. ವಿಶೇಷವಾಗಿ ಶ್ರಾವಣ ಮಾಸದ ಒಂದು ತಿಂಗಳು ಜಾತ್ರಾ ಮಹೋತ್ಸವ ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಇಲ್ಲಿನ ಶಿವನ ದರ್ಶನ ಪಡೆಯುತ್ತಾರೆ.