ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಾ ನಾಗಮಂಗಲ ತಾಲ್ಲೂಕಿನಲ್ಲಿ ಇರುವ ಪುರಾಣ ಪ್ರಸಿದ್ಧ ಮತ್ತು ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವು ಉತ್ತರ-ದಕ್ಷಿಣವಾಗಿ ಹಬ್ಬಿರುವ ಕಲ್ಲು ಬಂಡೆಗಳಿಂದ ಕೂಡಿದ್ದು, ಸಮುದ್ರ ಮಟ್ಟದಿಂದ ಸುಮಾರು 3221 ಅಡಿ ಎತ್ತರವಾಗಿದೆ.
ಗಂಗಾಧರೇಶ್ವರನು ಇಲ್ಲಿಯ ಪ್ರಧಾನ ಅಧಿದೇವತೆ ಮತ್ತು ಕಾಲಭೈರವೇಶ್ವರನು ಇಲ್ಲಿಯ ಕ್ಷೇತ್ರಪಾಲಕನು. ಈ ದೇವಸ್ಥಾನದಲ್ಲಿ ಕಾಲ ಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಪೂಜೆ ಮಾಡಲಾಗುತ್ತದೆ. ಶ್ರೀ ಆದಿಚುಂಚನಗಿರಿಯು ಅತ್ಯಂತ ಪ್ರಾಚೀನವೂ, ಪವಿತ್ರವೂ ಆದ ಮಹಾ ಧರ್ಮಕ್ಷೇತ್ರ ಹಾಗೂ ತಪೋಭೂಮಿಯಾಗಿದ್ದು, ಸುಮಾರು 2000 ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ.
ಈ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 109 ಕಿ.ಮೀ, ಮಂಡ್ಯದಿಂದ 80 ಕಿ.ಮೀ ದೂರದಲ್ಲಿದೆ. ಹಾಗೂ ನಾಗಮಂಗಲ ತಾಲೂಕಿನಿಂದ 25 ಕಿ.ಮೀ ಮತ್ತು ಬೆಳ್ಳೂರು ಕ್ರಾಸ್ನಿಂದ 13 ಕಿ.ಮೀ ದೂರದಲ್ಲಿದೆ.
ಹಸಿರು ಕಾನನಗಳಿಂದ ಕೂಡಿ, ರಮಣೀಯವೂ, ಪ್ರಶಾಂತವೂ ಆದ ಈ ಕ್ಷೇತ್ರವು ಪರಶಿವನ ತಪೋಭೂಮಿಯಾಗಿದ್ದಿತೆಂದು ಪುರಾಣ ಮತ್ತು ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ಮಠವು ಒಂದು ಬೆಟ್ಟದ ಮೇಲೆ ಇದ್ದು ಬೆಟ್ಟದ ಶಿಖರವನ್ನು ಆಕಾಶಭೈರವ ಎನ್ನುತ್ತಾರೆ ಹಾಗೂ ಇಲ್ಲಿರುವ ಪವಿತ್ರ ಹೊಂಡವನ್ನು ಬಿಂದುಸರೋವರ ಎಂದು ಕರೆಯುತ್ತಾರೆ.
ಪುರಾಣ ಮತ್ತು ಜನಪದ ಸಾಹಿತ್ಯ
ಸಿದ್ಧಯೋಗಿಯ ಅವತಾರವನ್ನು ತಾಳಿದ ಪರಶಿವನು ಗಜಾರಣ್ಯದ ಚುಂಚನಕಟ್ಟೆಗೆ ಬಂದು ಕಾವೇರಿ ನದೀ ತಟದಲ್ಲಿ ತಪೋಮಗ್ನನಾದನು. ಆ ಸಮಯದಲ್ಲಿ ತ್ರೇತಾಯುಗದಲ್ಲಿ ತಂದೆಯ ಆಜ್ಞಾನುಸಾರವಾಗಿ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಡನೆ ದಂಡಕಾರಣ್ಯದ ಪಂಚವಟೀ ತೀರದಲ್ಲಿ ವಾಸ ಮಾಡುತ್ತಿದ್ದಾಗ, ರಾವಣನು ಸೀತಾಪಹರಣ ಮಾಡಿದ ಬಳಿಕ ಸೀತಾನ್ವೇಷಣೆಗೆ ಹೊರಟಿದ್ದ ರಾಮಲಕ್ಷ್ಮಣರು ಚುಂಚನಕಟ್ಟೆ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಶಿವನನ್ನು ಕಂಡು ಭಕ್ತಿಯಿಂದ ವಂದಿಸಿದಾಗ ಪ್ರಸನ್ನನಾದ ಶಿವನು ನಿಮ್ಮ ಇಷ್ಟಾರ್ಥವು ನೆರವೇರಲೆಂದು ಆಶೀರ್ವದಿಸಿ, ಶ್ರೀರಾಮನಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು, ಪ್ರಶಾಂತವೂ, ರಮಣೀಯವೂ ಆದ ಚುಂಚನಗಿರಿಗೆ ಬಂದು ತಪೋಮಗ್ನನಾದನು’ ಎಂದು ಒಂದು ಐತಿಹ್ಯವಿದೆ.
ಇನ್ನೊಂದು ಜನಪದ ಸಾಹಿತ್ಯದ ಪ್ರಕಾರ, ಈ ಗಿರಿಯ ದಟ್ಟವಾದ ಅರಣ್ಯದಲ್ಲಿ ಚುಂಚ ಮತ್ತು ಕಂಚರೆಂಬ ಇಬ್ಬರು ಸೋದರ ರಾಕ್ಷಸರು ವಾಸವಾಗಿದ್ದರು. ಅವರು ಇಲ್ಲಿ ವಾಸಿಸುತ್ತಿದ್ದ ಜನರಿಗೆ ಹಿಂಸೆಯನ್ನು ಕೊಡುತ್ತಿದ್ದರೆಂದೂ ಮತ್ತು ಇಲ್ಲಿನ ಜನರು ಇವರ ಹಿಂಸೆಯನ್ನು ಸಹಿಸಲಾರದೆ ಶಿವನ ಮೊರೆ ಹೊಕ್ಕಾಗ, ಶಿವನು ಈ ರಾಕ್ಷಸರನ್ನು ಸಂಹರಿಸಿದನೆಂದೂ, ಮೊದಲು ಚುಂಚ ವಾಸಮಾಡಿಕೊಂಡಿದ್ದ, ಈ ಗಿರಿಗೆ ’ಚುಂಚನಗಿರಿ’ ಎಂಬ ಹೆಸರು ಬಂದಿತೆಂದೂ ತಿಳಿದುಬರುತ್ತದೆ.
ಭೇಟಿ ನೀಡಿ