ವಿಭೂತಿಹಳ್ಳಿಯ ಇತಿಹಾಸಪೂರ್ವ ಶಿಲಾ ಜೋಡಣೆ ತಾಣ (Prehistoric Stone Alignment of Vibhutihalli) ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿರುವ ಪ್ರಮುಖ ಪುರಾತತ್ವ ತಾಣವಾಗಿದೆ. ಈ ಸ್ಥಳವು ಇತಿಹಾಸಪೂರ್ವ ಕಾಲದ ಮಾನವ ನಾಗರಿಕತೆಗೆ ಸಂಬಂಧಿಸಿದ ಅಪರೂಪದ ಸ್ಮಾರಕವಾಗಿದ್ದು, ಪ್ರಾಚೀನ ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳು ಮತ್ತು ಅವಶೇಷಗಳ ಅಧಿನಿಯಮ, 1958ರ ಅಡಿಯಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ.
ವಿಭೂತಿಹಳ್ಳಿಯ ದೂರಗಳು
- ಬೆಂಗಳೂರು – 500 ಕಿ.ಮೀ
- ಯಾದಗಿರಿ – 43 ಕಿ.ಮೀ
- ಶಹಾಪುರ– 4 ಕಿ.ಮೀ
- ಯಾದಗಿರಿ ರೈಲ್ವೆ ನಿಲ್ದಾಣ – 41 ಕಿ.ಮೀ

ಖಾಗೋಳಿಕ ಮಹತ್ವ
ಭವಿಷ್ಯದ ಋತುಚಕ್ರವನ್ನು ನಿಖರವಾಗಿ ಊಹಿಸುವ ಸಾಮರ್ಥ್ಯದ ಮೇಲೆ ಜನರ ಬದುಕು ಅವಲಂಬಿತವಾಗಿದ್ದ ಕಾಲದಲ್ಲಿ ಇಂತಹ ತಾಣಗಳನ್ನು ನಿರ್ಮಿಸಲಾಗುತ್ತಿತ್ತು. ಇಂತಹ ಕಲ್ಲಿನ ಜೋಡಣೆ ತಾಣವನ್ನು ನಿರ್ಮಿಸಲು ಸೂಕ್ಷ್ಮ ಯೋಜನೆ, ಖಗೋಳ ಜ್ಞಾನ ಹಾಗೂ ಅಪಾರ ಶ್ರಮ ಅಗತ್ಯವಾಗಿತ್ತು. ಆದರೆ, ಖಗೋಳ ಮತ್ತು ಪಂಚಾಂಗ ಸಂಬಂಧಿತ ಘಟನೆಗಳನ್ನು ಗುರುತಿಸುವುದು ಏಕೆ ಮುಖ್ಯವಾಗಿತ್ತು? ಏಕೆಂದರೆ ಬಿತ್ತನೆ, ಕೊಯ್ಲು, ಬೇಟೆ ಹಾಗೂ ವಿವಿಧ ಹುಲ್ಲುಗಾವಲುಗಳಿಗೆ ವಲಸೆ ಹೋಗುವಂತಹ ಮಹಾಶಿಲಾಯುಗದ ಸಮಾಜಗಳ ಅನೇಕ ಚಟುವಟಿಕೆಗಳು ಋತುಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದವು. ಋತುಗಳ ಬದಲಾವಣೆಯನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಜನರ ಜೀವನ ಮತ್ತು ಬದುಕಿನ ಯಶಸ್ಸಿಗೆ ಅತ್ಯಂತ ಅವಶ್ಯಕವಾಗಿತ್ತು.
ಭಾರತದಲ್ಲಿ ಇಂತಹ ಕಲ್ಲಿನ ಜೋಡಣೆ ತಾಣಗಳು ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ವಿಭೂತಿಹಳ್ಳಿಯ ಇತಿಹಾಸಪೂರ್ವ ಶಿಲಾ ಜೋಡಣೆ ತಾಣವು ಅತ್ಯಂತ ದೊಡ್ಡದು ಹಾಗೂ ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ತಾಣಗಳಲ್ಲಿ ಒಂದಾಗಿದೆ.
ಅತ್ಯಂತ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ಶಿಲಾ ಸಾಲುಗಳ ಜೋಡಣೆಯ ಮೂಲೆಗಳಿಂದ ಗಮನಿಸಿದಾಗ, ಅಯನ ಸಂಕ್ರಾಂತಿಯ ಸಂದರ್ಭದಲ್ಲಿ ಸಂಭವಿಸುವ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನಿಖರವಾಗಿ ವೀಕ್ಷಿಸಲು ಸಾಧ್ಯವಾಗುತ್ತಿತ್ತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಮಹಾಶಿಲೆಗಳನ್ನು ಕುರಿತಾಗಿ
ನಮ್ಮ ಪೂರ್ವಜರೂ ನಮ್ಮಂತೆಯೇ ಇದ್ದರು….
ಸುಮಾರು 2,000 ರಿಂದ 3,400 ವರ್ಷಗಳ ಹಿಂದಿನ ಕಾಲಕ್ಕೆ ನೀವು ಹಿಂದಿರುಗಿ ಪ್ರಯಾಣಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ಆಶ್ಚರ್ಯಕರ ಸಂಗತಿಯೆಂದರೆ, ಅಲ್ಲಿ ನೀವು ನಮ್ಮಂತೆಯೇ ಜೀವನ ನಡೆಸುತ್ತಿದ್ದ ಜನರನ್ನು ಕಾಣುತ್ತೀರಿ. ಇಂದಿಗೂ ನಾವು ಬೆಳೆಯುವ ಅನೇಕ ಬೆಳೆಗಳನ್ನು ಅವರೂ ಬೆಳೆಯುತ್ತಿದ್ದರು. ದನ, ಕುರಿ ಮತ್ತು ಮೇಕೆಗಳನ್ನು ಸಾಕುತ್ತಿದ್ದರು. ಕಬ್ಬಿಣದ ಸಲಕರಣೆಗಳನ್ನು ತಯಾರಿಸುವ ಹಾಗೂ ಬಳಸುವ ಕೌಶಲ್ಯವೂ ಅವರಿಗೆ ತಿಳಿದಿತ್ತು; ಅವರು ಕೇವಲ ಕಲ್ಲಿನ ಉಪಕರಣಗಳ ಮೇಲೆ ಅವಲಂಬಿತರಾಗಿರಲಿಲ್ಲ.
ಅವರ ಸಮಾಜದಲ್ಲಿಯೂ ಸಂಘರ್ಷಗಳು ಮತ್ತು ಯುದ್ಧಗಳು ನಡೆಯುತ್ತಿದ್ದವು. ಯಾರಾದರೂ ಮರಣ ಹೊಂದಿದಾಗ, ಅವರ ಸಂಪ್ರದಾಯದಂತೆ ಮೃತದೇಹವನ್ನು ದಹನ ಮಾಡುತ್ತಿದ್ದರು ಅಥವಾ ಸಮಾಧಿ ಮಾಡುತ್ತಿದ್ದರು.
ಕಲ್ಲುಗಳು, ಮೂಳೆಗಳು ಹಾಗೂ ಮತ್ತಷ್ಟು….
ಮರಣ ಹೊಂದಿದವರ ಸ್ಮರಣಾರ್ಥವಾಗಿ ಅಥವಾ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ, ಪುರಾತನ ಸ್ಮಶಾನಗಳಲ್ಲಿ ಮಹಾಶಿಲೆಗಳು (Megaliths) ಎಂದು ಕರೆಯಲ್ಪಡುವ ಬೃಹತ್ ಕಲ್ಲಿನ ಸ್ಮಾರಕಗಳನ್ನು ನಿರ್ಮಿಸಲಾಗುತ್ತಿತ್ತು. ಹಾಸುಬಂಡೆಯ ಗೋರಿಗಳು (Dolmens), ಹೂಳಲಾದ ಅಥವಾ ಅರೆಹೂಳಲಾದ ಕಲ್ಲಿನ ಕೊಠಡಿಗಳು, ನಿಡಿಗಲ್ಲುಗಳು (Menhirs), ಕಲ್ಲಿನ ವರ್ತುಲಗಳು (Stone Circles) ಹಾಗೂ ಕಲ್ಲಿನ ರಾಶಿಗಳಿಂದ ನಿರ್ಮಿಸಲಾದ ಕೈರ್ನ್ಗಳು (Cairns) ಸೇರಿದಂತೆ ವಿವಿಧ ರೀತಿಯ ಮಹಾಶಿಲಾ ಸ್ಮಾರಕಗಳನ್ನು ನಿರ್ಮಿಸುತ್ತಿದ್ದರು.
ಅಂತ್ಯಕ್ರಿಯೆಯ ಸಂಸ್ಕಾರಗಳೂ ವಿವಿಧ ರೀತಿಯಲ್ಲಿ ನೆರವೇರುತ್ತಿದ್ದವು. ಕೆಲವು ಸಮಾಧಿಗಳಲ್ಲಿ ಮೃತರ ಕೆಲವೇ ಮೂಳೆಗಳು ಮಾತ್ರ ಕಂಡುಬಂದಿವೆ. ಇನ್ನು ಕೆಲವು ಸಮಾಧಿಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನರನ್ನು ಒಟ್ಟಿಗೆ ಸಮಾಧಿ ಮಾಡಲಾಗಿದೆ. ಅನೇಕ ಸಂದರ್ಭಗಳಲ್ಲಿ ಮೃತದೇಹಗಳನ್ನು ದಹನ ಮಾಡಿದ ನಂತರ, ಅವರ ಅಸ್ಥಿ ಅಥವಾ ಬೂದಿಯನ್ನು ಸಮಾಧಿ ಮಾಡಲಾಗುತ್ತಿತ್ತು. ವಿವಿಧ ರೀತಿಯ ಅಂತ್ಯಕ್ರಿಯೆಗಳು ಮತ್ತು ಮಹಾಶಿಲಾ ಸ್ಮಾರಕಗಳು ಸಮಾಜದಲ್ಲಿದ್ದ ಸಾಮಾಜಿಕ ವರ್ಗ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಬಹುತೇಕ ಸಮಾಧಿಗಳು ವಯಸ್ಕ ಪುರುಷರದ್ದಾಗಿವೆ. ಹಾಗಾದರೆ ಮಹಿಳೆಯರು ಮತ್ತು ಮಕ್ಕಳ ಸಮಾಧಿಗಳು ಎಲ್ಲಿವೆ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ಈ ಮಹಾಶಿಲಾ ಸ್ಮಾರಕಗಳನ್ನು ಯಾವ ತಂತ್ರಜ್ಞಾನದಿಂದ ಮತ್ತು ಹೇಗೆ ನಿರ್ಮಿಸಲಾಗುತ್ತಿತ್ತು ಎಂಬುದೂ ನಿಖರವಾಗಿ ತಿಳಿದಿಲ್ಲ. ಆದರೆ, ಈ ಮಹಾಶಿಲೆಗಳು ಅವರಿಗೆ ಅತ್ಯಂತ ಮಹತ್ವದ್ದಾಗಿದ್ದವು ಎಂಬುದು ಸ್ಪಷ್ಟ. ಇಲ್ಲದಿದ್ದರೆ, ಟನ್ಗಟ್ಟಲೆ ತೂಕದ ಬೃಹತ್ ಕಲ್ಲುಗಳನ್ನು ಕತ್ತರಿಸಿ, ದೂರದ ಸ್ಥಳಗಳಿಂದ ಸಾಗಿಸಿ, ಅಷ್ಟೊಂದು ಶ್ರಮಪಟ್ಟು ನಿಖರವಾಗಿ ಸ್ಥಾಪಿಸುವ ಅಗತ್ಯವೇ ಇರಲಿಲ್ಲ.
ನಮ್ಮ ಮಹಾಶಿಲಾ ಗತಕಾಲದ ಅರಿವು
ನಾಗರಿಕತೆಯ ಪದರಗಳು….
ಅನೇಕ ಸಂದರ್ಭಗಳಲ್ಲಿ, ಒಂದೇ ತಾಣದಲ್ಲಿ ವಿವಿಧ ಸಂಸ್ಕೃತಿಗಳು ಒಂದರ ನಂತರ ಒಂದರಂತೆ ನೆಲೆಸಿರುತ್ತವೆ. ಉದಾಹರಣೆಗೆ, ಮೊದಲು ನವಶಿಲಾಯುಗದ ಸಮಾಜಗಳು ವಾಸಿಸಿದ್ದ ತಾಣಗಳಲ್ಲಿಯೇ ನಂತರ ಮಹಾಶಿಲಾಯುಗದ ಜನರೂ ನೆಲೆಸಿರುವುದನ್ನು ಕಾಣಬಹುದು. ಇಂತಹ ಸಂದರ್ಭಗಳಲ್ಲಿ, ಪ್ರತಿಯೊಂದು ನಾಗರಿಕತೆಯ ಅವಶೇಷಗಳು ಭೂಮಿಯ ವಿವಿಧ ಪದರಗಳಲ್ಲಿ ಸಂಗ್ರಹವಾಗಿರುತ್ತವೆ.
ಪುರಾತತ್ವಜ್ಞರು ಉತ್ಖನನದ ವೇಳೆ ದೊರೆಯುವ ಕಲಾಕೃತಿಗಳನ್ನು ಕೇವಲ ದಾಖಲಿಸುವುದಷ್ಟೇ ಅಲ್ಲ, ಅವು ಯಾವ ಪದರದಲ್ಲಿ ಮತ್ತು ಯಾವ ನಿಖರವಾದ ಸ್ಥಾನದಲ್ಲಿ ಪತ್ತೆಯಾಗಿವೆ ಎಂಬ ಮಾಹಿತಿಯನ್ನೂ ದಾಖಲಿಸುತ್ತಾರೆ. ಒಂದೇ ತಾಣದಲ್ಲಿ ಅನೇಕ ಪದರಗಳು ಕಂಡುಬಂದರೆ, ಆಳದಲ್ಲಿರುವ ಪದರಗಳು ಮೇಲಿನ ಪದರಗಳಿಗಿಂತ ಹೆಚ್ಚು ಪ್ರಾಚೀನ ಕಾಲಕ್ಕೆ ಸೇರಿವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ನಮ್ಮ ಚರಿತ್ರೆಯ ಉತ್ಖನನ…
ಮಹಾಶಿಲಾಯುಗದ ಕುರಿತು ನಮಗೆ ಇಷ್ಟೊಂದು ಮಾಹಿತಿ ಹೇಗೆ ದೊರೆಯಿತು? ಅದಕ್ಕೆ ಪುರಾತತ್ವಜ್ಞರ ಪರಿಶ್ರಮವೇ ಪ್ರಮುಖ ಕಾರಣ. ಪುರಾತತ್ವಜ್ಞರು ಪ್ರಾಚೀನ ನಾಗರಿಕತೆಗಳು ಅಳಿದುಹೋದ ನಂತರ ಉಳಿದುಕೊಂಡಿರುವ ಪಳೆಯುಳಿಕೆಗಳು ಮತ್ತು ವಸ್ತುಗಳನ್ನು ಅಧ್ಯಯನ ಮಾಡಿ, ಆ ಕಾಲದ ಜನರ ಜೀವನಶೈಲಿ, ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.
ಇಲ್ಲಿರುವ ಮಹಾಶಿಲಾ ಸ್ಮಾರಕಗಳಂತಹ ಬೃಹತ್ ರಚನೆಗಳ ಜೊತೆಗೆ, ಮಡಿಕೆಗಳು, ಮಣಿಗಳು, ಕಬ್ಬಿಣ ಅಥವಾ ಕಲ್ಲಿನ ಸಲಕರಣೆಗಳು ಹಾಗೂ ಜನರು ದೈನಂದಿನ ಜೀವನದಲ್ಲಿ ಬಳಸುತ್ತಿದ್ದ ಇತರ ಸಣ್ಣ ವಸ್ತುಗಳೂ ಪಳೆಯುಳಿಕೆಗಳಾಗಿ ದೊರೆಯುತ್ತವೆ. ಈ ವಸ್ತುಗಳನ್ನು ಬಳಸಿದ ನಂತರ ಕೆಲವನ್ನು ಎಸೆಯಲಾಗುತ್ತಿತ್ತು, ಕೆಲವು ಕಳೆದುಹೋಗುತ್ತಿತ್ತು, ಇನ್ನೂ ಕೆಲವು ಉದ್ದೇಶಪೂರ್ವಕವಾಗಿ ನೆಲದಲ್ಲಿ ಹೂಳಲಾಗುತ್ತಿತ್ತು. ಕಾಲಕ್ರಮೇಣ ಅವೆಲ್ಲವೂ ಮಣ್ಣಿನೊಳಗೆ ಹುದುಗಿಹೋಗುತ್ತವೆ.
ಕ್ಷೇತ್ರ ಪುರಾತತ್ವಜ್ಞರು ತಾಣಗಳ ಸಮೀಕ್ಷೆ ಅಥವಾ ಉತ್ಖನನ ನಡೆಸುವಾಗ, ಇಂತಹ ಹುದುಗಿರುವ ಪಳೆಯುಳಿಕೆಗಳು ಮತ್ತು ಪ್ರಾಚೀನ ವಸ್ತುಗಳನ್ನು ಪತ್ತೆಹಚ್ಚಿ, ಅವುಗಳ ಆಧಾರದ ಮೇಲೆ ಅಂದಿನ ನಾಗರಿಕತೆಯ ಇತಿಹಾಸವನ್ನು ಮರುನಿರ್ಮಿಸುತ್ತಾರೆ.
ಮುರಿದ ಮಡಿಕೆಗಳು ಕಥೆ ಹೇಳಬಲ್ಲದು…
ಪುರಾತತ್ವ ಉತ್ಖನನಗಳಲ್ಲಿ ನಿಧಿ ಸಿಗುವುದು ಬಹಳ ಅಪರೂಪ. ಅದರ ಬದಲಿಗೆ, ಸಾಮಾನ್ಯವಾಗಿ ತುಕ್ಕು ಹಿಡಿದ ಸಲಕರಣೆಗಳು, ಮಡಿಕೆಗಳ ಒಡಕುಗಳು ಹಾಗೂ ಇತರ ಪಳೆಯುಳಿಕೆಗಳೇ ದೊರೆಯುತ್ತವೆ. ಇಂತಹ ವಸ್ತುಗಳಿಂದ ಏನು ತಿಳಿಯಬಹುದು? ನೀವು ಪುರಾತತ್ವಜ್ಞರಾಗಿದ್ದರೆ, ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು.
ಉದಾಹರಣೆಗೆ, ಉತ್ಖನನಗಳಲ್ಲಿ ದೊರೆತ ಮುರಿದ ನೇಗಿಲಿನ ಭಾಗಗಳು, ಬೀಸುವ ಕಲ್ಲಿನ ತುಣುಕುಗಳು ಹಾಗೂ ಆಹಾರದ ಅವಶೇಷಗಳು, ಮಹಾಶಿಲಾಯುಗದ ಜನರು ರಾಗಿ, ಅಕ್ಕಿ ಮತ್ತು ವಿವಿಧ ಬೇಳೆಕಾಳುಗಳನ್ನು ಬೆಳೆಸಿ, ಆಹಾರವಾಗಿ ಬಳಸುತ್ತಿದ್ದರು ಎಂಬುದನ್ನು ತಿಳಿಸುತ್ತವೆ. ಅಂದರೆ, ಅವರು ಇಂದಿನಂತೆಯೇ ಕೃಷಿ ಮಾಡಿ ಧಾನ್ಯಗಳನ್ನು ಬೆಳೆಯುತ್ತಿದ್ದರು ಎಂಬುದಕ್ಕೆ ಈ ಪಳೆಯುಳಿಕೆಗಳು ಸಾಕ್ಷಿಯಾಗಿವೆ.
ವಿಶ್ವದೆಲ್ಲೆಡೆ ಇರುವ ಮಹಾಶಿಲೆಗಳು
ಇತರರೊಂದಿಗೆ ಹಂಚಿಕೊಂಡ ಗತಕಾಲ…
ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗೂ ಏಷ್ಯಾ ಖಂಡ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಮಹಾಶಿಲೆಗಳು ಕಂಡುಬರುತ್ತವೆ. ಭಾರತದಲ್ಲಿ ಕಾಶ್ಮೀರ, ವಿಂಧ್ಯ ಮತ್ತು ಅರಾವಳ್ಳಿ ಪರ್ವತಶ್ರೇಣಿಗಳು, ವಾಯವ್ಯ, ಪೂರ್ವ ಹಾಗೂ ಈಶಾನ್ಯ ಭಾರತ, ಡಕ್ಕನ್ ಪ್ರಸ್ಥಭೂಮಿ ಮತ್ತು ದಕ್ಷಿಣ ಭಾರತದ ಒಳನಾಡು ಪ್ರದೇಶಗಳಲ್ಲಿ ಮಹಾಶಿಲಾ ಸ್ಮಾರಕಗಳು ವ್ಯಾಪಕವಾಗಿ ಕಂಡುಬರುತ್ತವೆ. ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಜನಾಂಗೀಯ ಸಮುದಾಯಗಳಲ್ಲಿ ಇಂದಿಗೂ ಮಹಾಶಿಲೆಗಳನ್ನು ನಿರ್ಮಿಸುವ ಸಂಪ್ರದಾಯ ಮುಂದುವರಿದಿದೆ.
ಕರಕುಶಲ ಕಲೆಗಳು ಹಾಗೂ ವ್ಯಾಪಾರಗಳು…
ಕರ್ನಾಟಕದ ಬಹುತೇಕ ಬೃಹತ್ ಮಹಾಶಿಲಾ ವಸಾಹತುಗಳು ಪುರಾತನ ವ್ಯಾಪಾರ ಮಾರ್ಗಗಳ ಸಮೀಪದಲ್ಲಿವೆ. ಈ ವಸಾಹತುಗಳ ಜನರು ದೇಶದ ಇತರ ಭಾಗಗಳ ಸಮುದಾಯಗಳೊಂದಿಗೆ ಮಣಿಗಳು, ಸಲಕರಣೆಗಳು ಹಾಗೂ ಇತರ ವಸ್ತುಗಳ ವ್ಯಾಪಾರ ನಡೆಸುತ್ತಿದ್ದರು ಎಂದು ವಿದ್ವಾಂಸರು ನಂಬಿದ್ದಾರೆ. ಅಲ್ಲದೆ, ಈ ವಸಾಹತುಗಳಲ್ಲಿ ನಿಪುಣ ಕುಶಲಕರ್ಮಿಗಳೂ ವಾಸಿಸುತ್ತಿದ್ದರು ಎಂಬುದಕ್ಕೆ ಪುರಾತತ್ವ ಸಾಕ್ಷ್ಯಗಳು ದೊರೆತಿವೆ.
ಇದಕ್ಕಾಗಿಯೇ ಸ್ಥಳೀಯವಾಗಿ ಲಭ್ಯವಿರದ ಕಲ್ಲುಗಳು, ಮಣಿಗಳು ಹಾಗೂ ಇತರ ವಸ್ತುಗಳು ಮಹಾಶಿಲಾ ತಾಣಗಳ ಉತ್ಖನನಗಳಲ್ಲಿ ಪುರಾತತ್ವಜ್ಞರಿಗೆ ಪತ್ತೆಯಾಗುತ್ತವೆ. ಇವು ಆ ಕಾಲದಲ್ಲಿ ದೂರದ ಪ್ರದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕವಿದ್ದುದನ್ನು ಸೂಚಿಸುತ್ತವೆ.
ಕರ್ನಾಟಕದ ಮಹಾಶಿಲೆಗಳು…
ಗಾತ್ರ ಮತ್ತು ರೂಪದಲ್ಲಿ ವೈವಿಧ್ಯಮಯವಾಗಿರುವ ನೂರಾರು ಮಹಾಶಿಲಾ ತಾಣಗಳು ಕರ್ನಾಟಕದಲ್ಲಿವೆ. ಈ ಮಹಾಶಿಲೆಗಳನ್ನು ಸುಮಾರು 2,000 ರಿಂದ 3,400 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇವುಗಳಲ್ಲಿ ಬಹುತೇಕವು ಕಬ್ಬಿಣಯುಗದಲ್ಲಿ ನಿರ್ಮಾಣಗೊಂಡಿದ್ದರೆ, ಕೆಲವು ಮಹಾಶಿಲೆಗಳು ಕಬ್ಬಿಣದ ವ್ಯಾಪಕ ಬಳಕೆ ಆರಂಭವಾಗುವುದಕ್ಕೂ ಮುನ್ನವೇ ನಿರ್ಮಿಸಲ್ಪಟ್ಟಿವೆ.
ಇಂದು ಅನೇಕ ಮಹಾಶಿಲಾ ತಾಣಗಳಲ್ಲಿ ಒಂದು ಅಥವಾ ಎರಡು ಮಹಾಶಿಲಾ ಸ್ಮಾರಕಗಳು ಮಾತ್ರ ಉಳಿದುಕೊಂಡಿವೆ. ಆದರೆ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮತ್ತು ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ನಂತಹ ತಾಣಗಳಲ್ಲಿ ನೂರಾರು ವೈವಿಧ್ಯಮಯ ಮಹಾಶಿಲಾ ಸ್ಮಾರಕಗಳನ್ನು ಕಾಣಬಹುದು. ಇವುಗಳಲ್ಲಿ ಕೆಲವು ತಾಣಗಳು ವಾಸಸ್ಥಳಗಳ ಅವಶೇಷಗಳನ್ನೂ ಒಳಗೊಂಡಿವೆ.
ಉತ್ತರ ಕರ್ನಾಟಕದಲ್ಲಿ, ವಿಶೇಷವಾಗಿ ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅನೇಕ ಬೃಹತ್ ಮಹಾಶಿಲಾ ತಾಣಗಳು ಕಂಡುಬರುತ್ತವೆ.
ಯಾದಗಿರಿ
ಭೇಟಿ ನೀಡಿ











