ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಬೆಟ್ಟವಾಗಿದೆ. ಈ ಪ್ರದೇಶವು ಏಷ್ಯಾದಲ್ಲೇ ಅತಿ ಹೆಚ್ಚು ರಣಹದ್ದುಗಳು ಕಂಡುಬರುವ ಪ್ರದೇಶಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ. ರಾಮದೇವರ ಬೆಟ್ಟವನ್ನು ‘ದಕ್ಷಿಣದ ಚಿತ್ರಕೂಟ’ ಎಂದೂ ಕರೆಯಲಾಗುತ್ತದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿದೆ.
ರಾಮದೇವರಬೆಟ್ಟ ರಣಹದ್ದು ಅಭಯಾರಣ್ಯದ ದೂರಗಳು
- ಬೆಂಗಳೂರು – 45 ಕಿ.ಮೀ
- ರಾಮನಗರ – 6 ಕಿ.ಮೀ
- ರಾಮನಗರ ರೈಲ್ವೆ ನಿಲ್ದಾಣ – 6 ಕಿ.ಮೀ
ಈ ಬೆಟ್ಟಕ್ಕೆ ಚಾರಣ ಮಾಡಲು ಪ್ರವೇಶ ಶುಲ್ಕ ಹಾಗೂ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಪ್ರವೇಶ ಶುಲ್ಕವು ಪ್ರತಿ ವ್ಯಕ್ತಿಗೆ ₹25/- ಆಗಿರುತ್ತದೆ. ಇಲ್ಲಿ ರಣಹದ್ದುಗಳ ಕುರಿತು ಮಾಹಿತಿ ನೀಡುವ ಮಾಹಿತಿ ಕೇಂದ್ರವೂ ಇದೆ.
ರಾಮದೇವರ ಬೆಟ್ಟದ ಚಾರಣದ ಆರಂಭದಲ್ಲೇ ಆಂಜನೇಯಸ್ವಾಮಿಯ ಉದ್ಭವ ಮೂರ್ತಿಯನ್ನು ಕಾಣಬಹುದು. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯ ಮತ್ತು ಶ್ರೀ ಪಟ್ಟಾಭಿರಾಮ ದೇವಾಲಯಗಳಿವೆ.
ಇತಿಹಾಸ
ಸ್ಥಳಪುರಾಣದ ಪ್ರಕಾರ, ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರು. ಆಗ ಈ ಪ್ರದೇಶದಲ್ಲಿ ಕಾಕಾಸುರ ಎಂಬ ರಾಕ್ಷಸನು ತೊಂದರೆ ನೀಡುತ್ತಿದ್ದನೆಂದು ಹೇಳಲಾಗುತ್ತದೆ. ಇದರಿಂದ ಕೋಪಗೊಂಡ ಶ್ರೀರಾಮನು ಬಾಣದಿಂದ ಕಾಕಾಸುರನ ಒಂದು ಕಣ್ಣನ್ನು ಹೊಡೆದು ಕಿತ್ತುಹಾಕಿ ಅವನಿಗೆ ಶಾಪ ನೀಡಿದನು. ಅಂದಿನಿಂದ ಈ ಬೆಟ್ಟದಲ್ಲಿ ಒಂದು ಕಾಗೆಯೂ ಕಾಣಿಸುವುದಿಲ್ಲ ಎಂಬ ನಂಬಿಕೆ ಇದೆ.
ಬೆಟ್ಟದ ಮೇಲಿರುವ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇವಾಲಯಗಳ ಮುಂಭಾಗದಲ್ಲಿ ಬೃಹದಾಕಾರದ ಏಳು ಬಂಡೆಗಳಿವೆ. ಸ್ಥಳಪುರಾಣದ ಪ್ರಕಾರ, ಸಪ್ತಋಷಿಗಳು ಸೀತೆಗಾಗಿ ನಿರ್ಮಿಸಿದರೆಂದು ಹೇಳಲಾಗುವ ಕೊಳದಲ್ಲಿ ಸ್ನಾನ ಮಾಡಿ, ಅಲ್ಲಿಯೇ ತಪಸ್ಸು ಮಾಡಿ ನಂತರ ಕಲ್ಲಾದರೆಂದು ನಂಬಲಾಗಿದೆ.
ಪಟ್ಟಾಭಿರಾಮ ದೇವಾಲಯಕ್ಕೆ ಈ ಹೆಸರು ಬರಲು ಒಂದು ಪೌರಾಣಿಕ ಹಿನ್ನೆಲೆ ಇದೆ. ಪಟ್ಟಾಭಿಷೇಕಗೊಂಡ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸುಖಾಸುರ ಎಂಬ ರಾಕ್ಷಸನು ದಾಳಿ ಮಾಡಿದನೆಂದು ಹೇಳಲಾಗುತ್ತದೆ. ಆಗ ಮೂರ್ತಿಯನ್ನು ಅಲ್ಲೇ ಇರಿಸಿ, ರಾಕ್ಷಸನನ್ನು ಸಂಹರಿಸಿದ ನಂತರ ಮೂರ್ತಿಯನ್ನು ಮತ್ತೆ ಎತ್ತಲು ಪ್ರಯತ್ನಿಸಿದಾಗ ಅದು ಅಲ್ಲಿಂದ ಕದಲಲಿಲ್ಲ. ಆಗ ಆಕಾಶವಾಣಿಯೊಂದು, “ಈ ಸ್ಥಳವು ನನಗೆ ಪ್ರಶಸ್ತವಾಗಿದೆ; ನಾನು ಇಲ್ಲಿಯೇ ನೆಲೆಸುವೆ,” ಎಂದು ಹೇಳಿದೆಯೆಂದು ನಂಬಲಾಗಿದೆ. ನಂತರ ಆ ಮೂರ್ತಿಯನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಇಲ್ಲಿರುವ ಮೂರ್ತಿಯು ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ.
ವನವಾಸದ ಸಂದರ್ಭದಲ್ಲಿ ಸೀತೆಗೆ ನೀರು ಬೇಕೆಂದು ತಿಳಿಸಿದಾಗ, ಶ್ರೀರಾಮನು ಬಾಣ ಹಾರಿಸಿ ಒಂದು ಕೊಳವನ್ನು ನಿರ್ಮಿಸಿದನೆಂದು ಸ್ಥಳಪುರಾಣ ಹೇಳುತ್ತದೆ. ಆ ಕೊಳವು ಇಂದಿಗೂ ಇಲ್ಲಿದೆ. ಈ ಕೊಳದ ಆಳವನ್ನು ಇಂದಿನವರೆಗೂ ಯಾರೂ ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಯಾವುದೇ ಬೇಸಿಗೆ ಕಾಲದಲ್ಲಿಯೂ ಈ ಕೊಳ ಬತ್ತುವುದಿಲ್ಲ ಎಂಬುದು ಇಲ್ಲಿನ ವಿಶೇಷವಾಗಿದೆ.
ಭೇಟಿ ನೀಡಿ




