ಅಕ್ಕ ನಾಗಮ್ಮ ಗವಿ

ಅಕ್ಕನಾಗಮ್ಮ ಗವಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿದೆ. ಇದು 12ನೇ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯರಾದ ಅಕ್ಕನಾಗಮ್ಮನವರಿಗೆ ಸಮರ್ಪಿತವಾದ ಗವಿಯಾಗಿದೆ. ಶಿವಶರಣೆ ಅಕ್ಕನಾಗಮ್ಮನವರು ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿದ್ದು, ಇಡೀ ಶರಣ ಸಂಕುಲ ಮತ್ತು ವಚನ ಸಾಹಿತ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರ ಮಹಿಳೆಯಾಗಿದ್ದರು.

ಅಕ್ಕ ನಾಗಮ್ಮ ಗವಿಯ ದೂರಗಳು

  • ಬೆಂಗಳೂರು – 642 ಕಿ.ಮೀ
  • ಬೀದರ್ – 76 ಕಿ.ಮೀ
  • ಬಸವಕಲ್ಯಾಣ – 4 ಕಿ.ಮೀ
  • ಹುಮ್ನಾಬಾದ್ ರೈಲ್ವೆ ನಿಲ್ದಾಣ – 30 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 78 ಕಿ.ಮೀ

ಇದು ಎರಡನೇ ಅತಿದೊಡ್ಡ ಗವಿಯಾಗಿದೆ. ಸುಮಾರು ನೂರು ಅಡಿ ಉದ್ದವಿರುವ ಈ ಗವಿಯು ದಾಸೋಹದ ಮನೆಯಾಗಿ ಕೂಡ ಕಾರ್ಯನಿರ್ವಹಿಸಿತ್ತು.

ಅಕ್ಕನಾಗಮ್ಮನವರು ಬಸವಣ್ಣನವರ ಸಹೋದರಿ ಹಾಗೂ 12ನೇ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯರಾಗಿದ್ದರು. ಶಾಂತ ಸ್ವಭಾವದ ಮಹಿಳಾ ಆಧ್ಯಾತ್ಮಿಕತೆಯ ಪ್ರತೀಕ, ತ್ಯಾಗದ ತವರು, ಯೋಗದ ಜಗುಲಿ ಹಾಗೂ ಶಿವಯೋಗದ ಮೂರ್ತಿರೂಪವೇ ಅಕ್ಕನಾಗಮ್ಮನವರು. ಬಸವೇಶ್ವರರು ಕೈಗೊಂಡ ಎಲ್ಲಾ ಚಟುವಟಿಕೆಗಳಿಗೆ ಅವರು ಬೆಂಬಲವಾಗಿ ನಿಂತಿದ್ದರು. ಕರ್ನಾಟಕದ ಶಿವಶರಣರು ಅಕ್ಕನಾಗಮ್ಮನವರ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವನ್ನು ಹೊಂದಿದ್ದಾರೆ.

ಚೆನ್ನಬಸವ ಪುರಾಣ, ಪುರಾತನ ದೇವಿಯರ ತ್ರಿಪದಿ ಹಾಗೂ ಬಸವ ಪುರಾಣ ಗ್ರಂಥಗಳಲ್ಲಿ ಅಕ್ಕನಾಗಮ್ಮನವರ ಜೀವನ ಮತ್ತು ಸಾಧನೆಗಳ ಉಲ್ಲೇಖಗಳು ಕಂಡುಬರುತ್ತವೆ.

ಬಾಗೇವಾಡಿಯು ಅಕ್ಕನಾಗಮ್ಮನವರ ಜನ್ಮಸ್ಥಳವಾಗಿದೆ. ಅವರ ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ. ಚನ್ನಬಸವೇಶ್ವರರು ಅವರ ಪುತ್ರರಾಗಿದ್ದು, ಬಸವೇಶ್ವರರು ಅವರ ಸಹೋದರರಾಗಿದ್ದರು. ಕಪ್ಪಡಿ ಸಂಗಮದ ಜಾತವೇದಸ್ವಾಮಿಗಳು ಅವರ ಗುರುಗಳಾಗಿದ್ದರು.

ಮಹಾಯೋಗಿನಿಯಾದ ಅಕ್ಕನಾಗಮ್ಮನವರ ಸ್ಮಾರಕಗಳು ವಿಜಯಪುರ ಜಿಲ್ಲೆಯ ಇಂಗಳೇಶ್ವರ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಳವಿಯಲ್ಲಿ ಕಂಡುಬರುತ್ತವೆ.

ಭೇಟಿ ನೀಡಿ
ಬಸವಕಲ್ಯಾಣ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section