ಪಂಚಲಿಂಗೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಗೋವಿಂದನಹಳ್ಳಿ ಗ್ರಾಮದಲ್ಲಿರುವ ಪುರಾತನ ಹಿಂದೂ ದೇವಾಲಯವಾಗಿದೆ. ಹೊಯ್ಸಳ ರಾಜ ವೀರ ಸೋಮೇಶ್ವರರ ಆಳ್ವಿಕೆಯಲ್ಲಿ ಈ ದೇವಾಲಯವನ್ನು ಕ್ರಿ.ಶ. 1238ರ ಸುಮಾರಿಗೆ ನಿರ್ಮಿಸಲಾಯಿತು.
ಈ ದೇವಾಲಯವು ಪಂಚಕೂಟ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಈ ಮಾದರಿಯ ಏಕೈಕ ದೇವಾಲಯವಾಗಿರುವುದು ಇದರ ವಿಶೇಷತೆ. ಹೊಯ್ಸಳರ ಕಾಲದ ಪ್ರಸಿದ್ಧ ಶಿಲ್ಪಿ ರುವಾರಿ ಮಲ್ಲಿತಮ್ಮ ಈ ದೇವಾಲಯದ ಶಿಲ್ಪಕಾರ್ಯಕ್ಕೆ ಕೈಹಾಕಿದ್ದಾನೆ ಎಂದು ತಿಳಿದುಬರುತ್ತದೆ.
ಪಂಚಲಿಂಗೇಶ್ವರ ದೇವಸ್ಥಾನ ಗೋವಿಂದನಹಳ್ಳಿಯ ದೂರಗಳು
- ಬೆಂಗಳೂರು – 165 ಕಿ.ಮೀ
- ಮಂಡ್ಯ – 76 ಕಿ.ಮೀ
- ಕೆ.ಆರ್. ಪೇಟೆ – 19 ಕಿ.ಮೀ
- ಮಂದಗೆರೆ ರೈಲು ನಿಲ್ದಾಣ – 9 ಕಿ.ಮೀ
ಈ ದೇವಾಲಯಕ್ಕೆ ಭೇಟಿ ನೀಡಬಹುದಾದ ಸಮಯ ಬೆಳಿಗ್ಗೆ 9:00ರಿಂದ ಸಂಜೆ 6:00ರವರೆಗೆ ಇರುತ್ತದೆ.
‘ಪಂಚಲಿಂಗೇಶ್ವರ’ ಎಂಬುದು ಅಕ್ಷರಶಃ ‘ಐದು ಲಿಂಗಗಳು’ ಎಂಬ ಅರ್ಥವನ್ನು ಹೊಂದಿದೆ. ದೇವಾಲಯದ ಸಂಪೂರ್ಣ ರಚನೆಯು ಪೂರ್ವಾಭಿಮುಖವಾಗಿದ್ದು, ಎರಡು ಮುಖಮಂಟಪಗಳು ಹಾಗೂ ನಂದಿಮಂಟಪಗಳೊಂದಿಗೆ ಉತ್ತರಾಭಿಮುಖವಾಗಿರುವ ಎರಡು ಪ್ರವೇಶದ್ವಾರಗಳನ್ನು ಒಳಗೊಂಡಿದೆ. ಪ್ರತಿಯೊಂದು ಮಂಟಪದ ಒಳಗೋಡೆಗಳಲ್ಲಿ ಹದಿನೇಳು ಗೂಡುಗಳು ಇದ್ದು, ಪ್ರತಿ ಪ್ರವೇಶದ್ವಾರವನ್ನು ಅದರದೇ ಆದ ದ್ವಾರಪಾಲಕರು ಕಾಪಾಡುತ್ತಾರೆ. ದೇವಾಲಯವು ಸಾಮಾನ್ಯ ನವರಂಗಕ್ಕೆ ಸಂಪರ್ಕ ಹೊಂದಿರುವ ಐದು ಗರ್ಭಗುಡಿಗಳನ್ನು ಒಳಗೊಂಡಿದೆ.
ಎಲ್ಲಾ ಗರ್ಭಗುಡಿಗಳಿಗೂ ಪ್ರತ್ಯೇಕ ಶಿಖರಗಳನ್ನು ಒದಗಿಸಲಾಗಿದ್ದು, ಅವುಗಳು ಸುಕನಾಸಿಯ ಮೂಲಕ ನವರಂಗದೊಂದಿಗೆ ಸಂಪರ್ಕ ಹೊಂದಿವೆ. ಈ ಐದು ಶಿವಲಿಂಗಗಳನ್ನು ಸದ್ಯೋಜಾತೇಶ್ವರ, ತತ್ಪುರುಷೇಶ್ವರ, ವಾಮದೇವೇಶ್ವರ, ಅಘೋರೇಶ್ವರ ಹಾಗೂ ಈಶಾನ್ಯೇಶ್ವರ ಎಂಬ ಶಿವನ ಐದು ವಿಭಿನ್ನ ನಾಮಗಳಿಂದ ಕರೆಯಲಾಗುತ್ತದೆ. ಈ ಲಿಂಗಗಳನ್ನು ಮಹಾಭಾರತದ ಪಾಂಡವರೊಂದಿಗೆ ಹೋಲಿಸಲಾಗಿದೆ. ದೇವಾಲಯದ ಶಿಖರಗಳು ದ್ರಾವಿಡ ಶೈಲಿಯಲ್ಲಿ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿವೆ.
ಈ ದೇವಾಲಯದ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ, ಇದು ಪ್ರಧಾನವಾಗಿ ಶಿವನಿಗೆ ಸಮರ್ಪಿತವಾಗಿದ್ದರೂ, ದೇವಾಲಯದ ಹೊರಗೋಡೆಗಳಲ್ಲಿ ವಿಷ್ಣುವಿನ ವಿವಿಧ ಅವತಾರಗಳ ಶಿಲ್ಪಗಳು ಕಾಣಿಸುತ್ತವೆ. ಹೊಯ್ಸಳರ ಆಳ್ವಿಕೆಯಲ್ಲಿ ಎರಡು ವಿಭಿನ್ನ ಹಂತಗಳಲ್ಲಿ ದೇವಾಲಯ ನಿರ್ಮಾಣಗೊಂಡಿರುವುದೇ ಇದಕ್ಕೆ ಕಾರಣವಾಗಿರಬಹುದು.
ದೇವಾಲಯದ ಒಳಭಾಗದಲ್ಲಿ ಗಣೇಶ, ಷಣ್ಮುಖ, ಭೈರವ, ಮಹಿಷಾಸುರಮರ್ದಿನಿ, ಬ್ರಹ್ಮ, ಇಂದ್ರ ಹಾಗೂ ಅರ್ಜುನನ ಶಿಲ್ಪಗಳು ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟಿವೆ. ಹಾಗೆಯೇ ಹೊರಗೋಡೆಗಳಲ್ಲಿ ಗರುಡ, ವೇಣುಗೋಪಾಲ, ವಿಠ್ಠಲ, ಮತ್ಸ್ಯ, ಕೂರ್ಮ, ವಾಮನ, ತ್ರಿವಿಕ್ರಮ, ನರಸಿಂಹ, ವರಾಹ ಹಾಗೂ ಲಕ್ಷ್ಮೀ–ನಾರಾಯಣರ ರೂಪಗಳಲ್ಲಿ ವಿಷ್ಣುವಿನ ಅವತಾರಗಳನ್ನು ಕಾಣಬಹುದು.
ಭೇಟಿ ನೀಡಿ








