ಡಿಡಿ ಬೆಟ್ಟ (ದೇವರಾಯನದುರ್ಗ ಕೋಟೆ)ವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ದೇವರಾಯನದುರ್ಗ ಗ್ರಾಮದಲ್ಲಿ ಇದೆ. 1696ರಲ್ಲಿ ಮೈಸೂರು ಸಾಮ್ರಾಜ್ಯದ ಮಹಾಪರಾಕ್ರಮಿ ರಾಜ ಚಿಕ್ಕದೇವರಾಯ ಒಡೆಯರು ಈ ಕೋಟೆಯನ್ನು ಕಟ್ಟಿಸಿದರು. ತುಮಕೂರು ಜಿಲ್ಲೆಯು ಮೈಸೂರು ಪ್ರಾಂತ್ಯಕ್ಕೆ ಸೇರಿದ ನಂತರ ಈ ಕೋಟೆ ನಿರ್ಮಾಣಗೊಂಡಿತು. ಮೊದಲು ಈ ಬೆಟ್ಟವನ್ನು “ಆನೆಬಿದ್ದಸರಿ” ಎಂದು ಕರೆಯಲಾಗುತ್ತಿತ್ತು. ನಂತರ ಜಾಡಕ ಎಂಬ ಮುಖ್ಯಸ್ಥನು ಈ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ ಇದನ್ನು “ಜಡಕನ ದುರ್ಗ” ಎಂದು ಕರೆಯಲಾಯಿತು.
ದೇವರಾಯನದುರ್ಗ ಬೆಟ್ಟದ ದೂರಗಳು
- ಬೆಂಗಳೂರು – 72 ಕಿ.ಮೀ
- ತುಮಕೂರು – 19 ಕಿ.ಮೀ
- ಕ್ಯಾತ್ಸಂದ್ರ ರೈಲ್ವೆ ನಿಲ್ದಾಣ – 15 ಕಿ.ಮೀ
- ತುಮಕೂರು ರೈಲ್ವೆ ನಿಲ್ದಾಣ – 19 ಕಿ.ಮೀ
ಈ ಸ್ಥಳವನ್ನು “ಕರಿಗಿರಿ” ಎಂದೂ ಕರೆಯುತ್ತಾರೆ. ಕನ್ನಡದಲ್ಲಿ “ಕರಿ” ಅಂದರೆ ಆನೆ, “ಗಿರಿ” ಅಂದರೆ ಬೆಟ್ಟ. ದೇವರಾಯನದುರ್ಗ ಬೆಟ್ಟವನ್ನು ಪೂರ್ವ ಭಾಗದಿಂದ ನೋಡಿದಾಗ ಅದು ಆನೆಯನ್ನು ಹೋಲುವುದರಿಂದ “ಕರಿಗಿರಿ” ಎಂಬ ಹೆಸರು ಬಂದಿದೆ. 1696ರಲ್ಲಿ ಮೈಸೂರು ರಾಜ ಚಿಕ್ಕದೇವರಾಜ ಒಡೆಯರು ವಶಪಡಿಸಿಕೊಂಡ ನಂತರ ಈ ಗುಡ್ಡಕ್ಕೆ “ದೇವರಾಯನದುರ್ಗ” ಎಂಬ ಹೆಸರು ಬಂದಿತು.
ದೇವರಾಯನದುರ್ಗ ಬೆಟ್ಟಕ್ಕೆ ತೆರಳಲು ಉತ್ತಮ ರಸ್ತೆ ಮಾರ್ಗವಿದೆ. ಹಾಗೆಯೇ ದುರ್ಗದಹಳ್ಳಿ ಗ್ರಾಮದಲ್ಲಿ ಹಳೆಯ ಕಾಲದ ಕಡಿದಾದ ದಾರಿ ಇದ್ದು, ದುರ್ಗದಹಳ್ಳಿ ಮೂಲಕ ಕೋಟೆ ಏರಲು ಆ ಕಡಿದಾದ ದಾರಿಯನ್ನು ಬಳಸಬಹುದು. ದೇವರಾಯನದುರ್ಗ ಕೋಟೆಯು ಒಟ್ಟು 13 ಸುತ್ತುಗಳಿರುವ ಕೋಟೆಯಾಗಿದೆ. ಮೊದಲಿಗೆ ಸಿಗುವುದು “ಪೆನಕೊಂಡೆ ಬಾಗಿಲು”. ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಹಾಗೂ ಲಕ್ಷ್ಮೀ ನರಸಿಂಹ ಎಂಬ ಮೂರು ದೇವಾಲಯಗಳಿವೆ.
- ಲಕ್ಷ್ಮೀ ನರಸಿಂಹ ದೇವಾಲಯವು ಬೆಟ್ಟದ ಮಧ್ಯ ಭಾಗದಲ್ಲಿ ಕಾಣಿಸುತ್ತದೆ.
- ಶ್ರೀ ಭೋಗ ಲಕ್ಷ್ಮೀನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ.
- ಶ್ರೀ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ.
ಭೋಗಾಲಕ್ಷ್ಮೀ ನರಸಿಂಹ ಸ್ವಾಮಿಯವರ ದೇವಸ್ಥಾನ
ದೇವರಾಯನ ದುರ್ಗದ ಮಧ್ಯಭಾಗದಲ್ಲಿ ಶ್ರೀ ಭೋಗಾ ಲಕ್ಷ್ಮೀನರಸಿಂಹ ಸ್ವಾಮಿಯವರ ದೇವಸ್ಥಾನವು ಪೂರ್ವಾಭಿಮುಖವಾಗಿ ಸ್ಥಾಪಿತವಾಗಿದೆ. ಈ ದೇವಸ್ಥಾನವು ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜ ಗೋಪುರ ಎಂಬ ಐದು ಅಂಗಗಳಿಂದಲೂ ಪರಿಪೂರ್ಣವಾಗಿ ನಿರ್ಮಿತವಾಗಿದೆ.
ಈ ದೇವಸ್ಥಾನದಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯವರು ದೂರ್ವಾಸ ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟು ಆರಾಧಿಸಲ್ಪಟ್ಟವರಾಗಿರುತ್ತಾರೆ. ಇದು ಪರಮ ತೇಜೋಮಯ ವಿಗ್ರಹವಾಗಿರುತ್ತದೆ. ಶ್ರೀ ನರಸಿಂಹ ಸ್ವಾಮಿಯು “ಸರ್ವತೋಮುಖದುರ್ವಾರ ತೇಜೋ ವಿಕ್ರಮಶಾಲಿ” ಎಂಬುದಾಗಿ ಪುರಾಣಗಳಲ್ಲಿ ಸ್ತುತಿಸಲ್ಪಟ್ಟಿರುವುದು ಎಷ್ಟು ಅರ್ಥ ಮತ್ತು ಭಾವ ಗರ್ಭಿತವಾಗಿದೆ ಎಂಬುದು ಈ ದೇವತಾ ಮೂರ್ತಿಯನ್ನು ದರ್ಶನ ಮಾಡಿದ ಕೂಡಲೇ ಭಕ್ತ ಜನರಿಗೆ ವೇದ್ಯವಾಗುತ್ತದೆ. ಶ್ರೀ ಸ್ವಾಮಿಯವರ ದೇವಸ್ಥಾನದಲ್ಲಿ ಅಮ್ಮನವರ ಸನ್ನಿಧಿಯು ಪ್ರತ್ಯೇಕವಾಗಿ ಇದೆ.
ಯೋಗಾನರಸಿಂಹ ಸ್ವಾಮಿ ದೇವಸ್ಥಾನ
ದೇವರಾಯನ ದುರ್ಗದಲ್ಲಿ ಸಮುದ್ರ ಮಟ್ಟದಿಂದ 4200 ಅಡಿ ಎತ್ತರದಲ್ಲಿ ಬೆಟ್ಟವೊಂದಿದೆ. ಈ ಗಿರಿ ಶೃಂಗದಲ್ಲಿ ಬ್ರಹ್ಮ ದೇವರಿಂದ ಸ್ಥಾಪಿತವಾಗಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಸ್ಥಾನವಿದೆ. ಈ ದೇವರನ್ನು ಶ್ರೀ ಯೋಗಾಲಕ್ಷ್ಮೀನರಸಿಂಹ ಸ್ವಾಮಿ ಎಂದು ಕರೆಯುತ್ತಾರೆ. ಈ ದೇವಸ್ಥಾನವು ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರ ಎಂಬ ಐದು ಅಂಗಗಳಿಂದಲೂ ಪರಿಪೂರ್ಣವಾಗಿದೆ. ಶ್ರೀ ಸ್ವಾಮಿಯವರ ಸನ್ನಿಧಾನವು ಉತ್ತರಾಭಿಮುಖವಾಗಿದೆ. ಅಮ್ಮನವರ ಸನ್ನಿಧಾನವು ಪೂರ್ವಾಭಿಮುಖವಾಗಿದೆ. ಕೆಳಗಿನ ಬೆಟ್ಟದ ದೇವಸ್ಥಾನಕ್ಕೂ ಮೇಲಿನ ಬೆಟ್ಟದ ದೇವಸ್ಥಾನಕ್ಕೂ ಒಂದು ಮೈಲಿಯ ಅಂತರವಿದೆ. ಕೆಳಗಿನ ಬೆಟ್ಟಕ್ಕಿಂತಲೂ ಮೇಲಿನ ಬೆಟ್ಟವು 500 ಅಡಿ ಎತ್ತರವಾಗಿದೆ.
ಡಾಬ್ಸ್ ಬಂಗಲೆ
ದೇವರಾಯನದುರ್ಗದಲ್ಲಿ ಬೆಟ್ಟದಲ್ಲಿ ಬ್ರಿಟಿಷರ ಕಾಲದ ನಿರ್ಮಾಣದ ಎರಡು ಪ್ರವಾಸಿ ಬಂಗಲೆಗಳು ಇದ್ದು, ಈ ಪ್ರವಾಸಿ ಬಂಗಲೆಯನ್ನು ಡಾಬ್ಸ್ ಬಂಗಲೆ ಎಂದು ಕರೆಯುತ್ತಾರೆ. ಈ ಬಂಗಲೆಯನ್ನು ಮೇಜರ್ ಜನರಲ್ ರಿಚರ್ಡ್ ಸ್ಟೀವರ್ಟ್ ಡಾಬ್ಸ್ ನಿರ್ಮಿಸಿದರು. ಅವರು 1834 ರಿಂದ 1861 ರವರೆಗೆ ಬ್ರಿಟಿಷ್ ಭಾರತದ ಮೈಸೂರು (ಮೈಸೂರು) ರಾಜಪ್ರಭುತ್ವದ ರಾಜ್ಯದಲ್ಲಿ ಚಿಟ್ಲೆಡ್ರೂಗ್ (ಚಿತ್ರದುರ್ಗ) ವಿಭಾಗದ ಮೊದಲ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದ, ನಂತರ ಮದ್ರಾಸ್ ಸ್ಥಳೀಯ ಪದಾತಿ ದಳದ 9 ನೇ ರೆಜಿಮೆಂಟ್ನಲ್ಲಿ ಮೇಜರ್-ಜನರಲ್ ಹುದ್ದೆಗೆ ಏರಿದರು. ಡಾಬ್ಸ್ ತುಮಕೂರುನಲ್ಲಿ ಆಗಿ 31 ವರ್ಷ ಸಹಾಯಕ ಕಮಿಷನರ್ ಆಗಿದ್ದರು. ಚಿಕ್ಕದೇವರಾಯರ ಕಾಲದಲ್ಲಿ ಈ ಬೆಟ್ಟಕ್ಕೆ ಬರಲು ದುರ್ಗದಹಳ್ಳಿ ಮುಕಾಂತರ ರಸ್ತೆ ಇದ್ದು, ನಂತರ ಬ್ರಿಟಿಶರ ಆಳ್ವಿಕೆ ಕಾಲದಲ್ಲಿ ಡಾಬ್ಸ್ ದೇವರಾಯನದುರ್ಗ ಬೆಟ್ಟಕ್ಕೆ ರಸ್ತೆ ನಿರ್ಮಿಸದನು. ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿರುವ ದಾಬಸ್ ಪೇಟೆ ಎಂಬ ಸಣ್ಣ ಪಟ್ಟಣಕ್ಕೆ ಅವರ ಹೆಸರಿಡಲಾಗಿದೆ.
ಭೇಟಿ ನೀಡಿ





